ಶಿರ್ಲಾಲು : ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಶ್ರೀ ದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ ಏಕಾಹ ಭಜನಾ ಕಾರ್ಯಕ್ರಮ ಮತ್ತು ಸುಮಾರು 45 ಭಜನಾ ತಂಡಗಳಿಂದ ಭಜನಾ ಕಮ್ಮಟೋತ್ಸವ ಎ.15 ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರುನಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಜಗನ್ನಾಥ ಕುಲಾಲ್ ಬೈರೊಟ್ಟು ತಿಳಿಸಿದರು.
ಅವರು ಎ.8 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿಶೇಷವಾಗಿ ತಾಲೂಕಿನ ಸುಮಾರು 45 ತಂಡಗಳು ಭಜನಾ ಕಮ್ಮಟೋತ್ಸವದಲ್ಲಿ ಭಾಗವಹಿಸಲಿದೆ. ದೇವರಿಗೆ ವಿಶೇಷ ರಂಗಪೂಜೆ, ಕಿರುತೆರೆ ನಿರ್ದೇಶಕ ಸುಭಾಶ್ ಅರ್ವ ಭಜನಾ ತರಬೇತುದಾರ ವಿ.ಹರೀಶ್ ನೆರಿಯ ಹಾಗೂ ಸಮಿತಿಯ ಮಾಜಿ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು, ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಶ್ರೀ ದೇವಿ ಮಹಿಳಾ ಕೇಂದ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಶಿರ್ಲಾಲು ಇದರ ಸಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಿಗ್ಗೆ ಪೂಜೆ, ಏಕಾಹ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ, ಸಂಜೆ ಬೆಳ್ಳಿಹಬ್ಬದ ಕಾರ್ಯಕ್ರಮ , ಸಂಜೆ 6.00 ಭಜನಾ ಕಮ್ಮಟೋತ್ಸವ ನಡೆಯಲಿದೆ.ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಪಾಂಗಾಲ್ದಾಡಿ ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಯ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ.ಉದ್ಘಾಟನೆಯನ್ನು ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ। ಪದ್ಮಪ್ರಸಾದ ಅಜಿಲರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲೋಕನಾಥೇಶ್ವರ ಭಜನಾ ಮಂಡಳಿ ಪ್ರಧಾನ ಕಾರ್ಯದರ್ಶಿ ಸದಾಶಿವ ಶಿವಗಿರಿ, ಭಜನಾ ಮಂಡಳಿ ಮಾಜಿ ಅಧ್ಯಕ್ಷರಾದ ಅಶೋಕ್ ಬುಡಂಗೊಟ್ಟು,ರಾಜೇಶ್ ಕುಲಾಲ್ ಬೈರೊಟ್ಟು ಉಪಸ್ಥಿತರಿದ್ದರು.