ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರಿಗೆ ನುಡಿನಮನ

Suddi Udaya

ಗುರುವಾಯನಕೆರೆ: ಐದು ಸಲ ಶಾಸಕರಾಗಿದ್ದ ವಸಂತ ಬಂಗೇರ ಕ್ಲೀನ್ ಹ್ಯಾಂಡ್. ಇದಕ್ಕಿಂತ ದೊಡ್ಡ ವಿಷಯ ಯಾವುದಿದೆ? ಇವರು ಶಾಸಕರಲ್ಲದಿದ್ದಾಗಲೂ ಶಾಸಕರೇ ಆಗಿದ್ದರು! ನ್ಯಾಯನಿಷ್ಠೆ, ಪ್ರಾಮಾಣಿಕ, ನಿಸ್ವಾರ್ಥ ಬಂಗೇರಾ ನಾಗರಿಕ ಸೇವಾ ಟ್ರಸ್ಟ್‌ನ ಕಾನೂನುಬದ್ಧವಾದ, ಪ್ರಜಾಪ್ರಭುತ್ವಕ್ಕೆ ತಕ್ಕುದಾದ ಹೋರಾಟಕ್ಕೆ ಬಲವಾಗಿ ಬೆಂಬಲವಾಗಿ ಇದ್ದರು. ಸಾರ್ವಜನಿಕ ಸೇವೆಗಾಗಿ ತನ್ನ ಭೂಮಿಗಳನ್ನೆಲ್ಲಾ ಕಳಕೊಳ್ಳುತ್ತಾ ಬಂದರೂ ಪಶ್ಚಾತಾಪವಿಲ್ಲದ ಸಾತ್ವಿಕರು. ಸೋಮನಾಥ ನಾಯಕ್‌ರು ಕೋರ್ಟ್‌ಗೆ ಸರೆಂಡರ್ ಆದಾಗ ಒಂದು ಚಾನೆಲ್‌ನ ಸಂದರ್ಶನದಲ್ಲಿ ಅವರು ಹೇಳಿದ್ದು- ಜೈಲಿಗೆ ಹಾಕಬೇಕಾದ್ದು ಸರಕಾರಿ ಅಧಿಕಾರಿಗಳನ್ನು. ಅವರು ಕೊಟ್ಟ ದಾಖಲೆಗಳನ್ನು ನಾಯಕ್‌ರು ಪ್ರಕಟಿಸಿದ್ದು. ಸತ್ಯ ಹೇಳಿದ್ರೆ ಮಾನ ಹೋಗುವುದು ಹೇಗೆ? ಎಂದು ಘರ್ಜಿಸಿದ್ರು. ಎನ್‌ಎಸ್‌ಟಿ ಕಾರ್ಯಕ್ರಮಗಳ ಹೆಚ್ಚಿನ ಸಂದರ್ಭಗಳಲ್ಲಿ ನಾನು ಅವರು ಜತೆಯಲ್ಲಿರುತ್ತಿದ್ದೆವು. ಆದರೆ ಇಂದು ಅವರು ಇಲ್ಲ. ಕೆಚ್ಚೆದೆಯ ಬಂಗೇರಾರಿಗೆ ನೂರು ನಮಸ್ಕಾರ ಎಂದು ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರು ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಟ್ರಸ್ಟ್ ಕಚೇರಿಯಲ್ಲಿ ನಡೆದ ದಿ| ಕೆ. ವಸಂತ ಬಂಗೇರಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.


ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ರು ಮಾತಾಡುತ್ತಾ ಕುವೆಟ್ಟು ಗ್ರಾಮ ಪಂಚಾಯತ್‌ನಿಂದ ಅವರ ರಾಜಕೀಯ ಜೀವನ ಆರಂಭವಾಗಿಸಿದ ಮತ್ತು ನಂತರದ ಸುದೀರ್ಘ ಸಂಬಂಧಗಳನ್ನು ವಿವರಿಸುತ್ತಾ ಅವರು ನಮ್ಮ ಸಂಸ್ಥೆಯ ಮಾತ್ರವಲ್ಲ ಕುಟುಂಬದ ಸದಸ್ಯರಾಗಿದ್ದರು ಎಂದರು. ಶೋಷಣಾ ಸಾಮ್ರಾಜ್ಯದ ವಿರುದ್ಧ ಹೋರಾಟಕ್ಕೆ ಅವರ ಸಹಕಾರ, ಬೆಂಬಲ ಸ್ಮರಿಸುತ್ತಾ ರಾಜಕೀಯ ಕ್ಷೇತ್ರದಲ್ಲಿ ಇಂತಹ ಭ್ರಷ್ಟಾಚಾರದ ಸೋಂಕು ಇಲ್ಲದ ವ್ಯಕ್ತಿ ಇನ್ನೊಬ್ಬರಿಲ್ಲ. ಸರಕಾರಿ ಅಧಿಕಾರಿಗಳು, ಪೊಲೀಸರು, ಬಂಗೇರಾರಿಗೆ ಹೆದರಿ ನಡುಗುತ್ತಿದ್ದರು. ಅವರು ಅನ್ಯಾಯವನ್ನು ಎಂದೂ ಸಹಿಸಿದವರಲ್ಲ ಎಂದರು.


ದಲಿತರ ಭೂಹಕ್ಕೊತ್ತಾಯ ಸಮಿತಿಯ ಸಂಚಾಲಕ ಎಂ.ಬಿ. ಕರಿಯ, ಹಿಂದು ಹಿತಚಿಂತನ ವೇದಿಕೆಯ ಸಂಚಾಲಕ ಸೋಮಶೇಖರ ದೇವಸ್ಯ, ಟ್ರಸ್ಟಿಗಳಾದ ದಯಾನಂದ ಪೂಜಾರಿ ಮತ್ತು ಸದಾಶಿವ ಹೆಗ್ಡೆ, ಟ್ರಸ್ಟ್ ಉಪಾಧ್ಯಕ್ಷೆ ವಿದ್ಯಾ ಎಸ್. ನಾಯಕ್, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ಬಾಬು ಎ., ದಲಿತ ಮುಖಂಡ ಬಾಬಿ ಮಾಲಾಡಿ, ಸುಕೇಶ್ ಕೆ., ಶೀನ ಪಿಲ್ಯ, ಕುರೈಮತ್ ಮತ್ತಿತರು ಬಂಗೇರಾರ ವ್ಯಕ್ತಿತ್ವವನ್ನು ಸ್ವಾನುಭವಗಳೊಂದಿಗೆ ವಿವರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

Leave a Comment

error: Content is protected !!