ಕಲ್ಮಂಜ ಗ್ರಾಮದ ಮಿಯ ನಿವಾಸಿ ಉಜಿರೆ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ: ರೂ.8.42 ಲಕ್ಷ ನಗದು ಸಹಿತ ಚಿನ್ನಾಭರಣ ವಶ: ನಾಲ್ಕು ವರ್ಷಗಳ ಹಿಂದೆ ಮನೆಯವರನ್ನು ಕಟ್ಟಿ ಹಾಕಿ ನಡೆದ ದರೋಡೆ

Suddi Udaya

ಧರ್ಮಸ್ಥಳ: ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಉಜಿರೆಯ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ರೂ 8,42,240/- ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡಿದ್ದು ಮೂರು ಮಂದಿ ದರೋಡೆಕೋರರನ್ನು ನಾಲ್ಕು ವರ್ಷದ ಸತತ ಹುಡುಕಾಟದ ನಂತರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಘಟನೆ ಹಿನ್ನಲೆ:
ಕಲ್ಮಂಜ ಗ್ರಾಮದ ಮಿಯಾ ಮನೆ ಅಚ್ಯುತ್ ಭಟ್ (56 ), ಎಂಬವರ ದೂರಿನಂತೆ ನನ್ನ ತಂದೆ ತಾಯಿಗೆ ನಾವು 6 ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ನಾನು ಉಜಿರೆ ಓಡಲದಲ್ಲಿ ಹೊಸ ಮನೆ ಕಟ್ಟಿದ್ದು, ಹೆಚ್ಚಾಗಿ ಮೂಲ ಮನೆಯಾದ ಕಲ್ಮಂಜದಲ್ಲಿ ತಾಯಿ ಶ್ರೀಮತಿ ಕಾಶಿಯಮ್ಮ ರವರೊಂದಿಗೆ ವಾಸವಾಗಿರುವುದಾಗಿದೆ. ನನ್ನ ತಮ್ಮಿಂದಿರು ಬೇರೆ ಬೇರೆ ಕಡೆಗಳಲ್ಲಿ ವಾಸವಾಗಿದ್ದು ರಜೆ ಸಮಯದಲ್ಲಿ ನಮ್ಮ ಮನೆಗೆ ಬಂದು ಹೋಗುವುದಾಗಿದೆ. ಇತ್ತೀಚೆಗೆ ನನ್ನ ತಮ್ಮನ ಪತ್ನಿ ಶ್ರೀಮತಿ ವಿಧ್ಯಾಕುಮಾರಿ ಹಾಗೂ ಆಕೆಯ ಚಿಕ್ಕ 3 ಮಕ್ಕಳೊಂದಿಗೆ ಊರಿಗೆ ಬಂದವರು ನಮ್ಮ ಮನೆಯಲ್ಲಿ ಇದ್ದರು. ದಿನಾಂಕ: 25-06-2020 ರಂದು ರಾತ್ರಿ ಸುಮಾರು 9.೦೦ ಗಂಟೆಗೆ ನಾವೆಲ್ಲರೂ ಊಟಮಾಡಿ ಮಲಗಿದ್ದೆವು. ದಿನಾಂಕ: 26-06-2020 ರ ರಂದು ಬೆಳಗ್ಗಿನ ಜಾವ ೦2.50 ಗಂಟೆಗೆ ನಾನು ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ನನ್ನನ್ನು ಸುತ್ತುವರಿದು ನನ್ನನ್ನು ಹಿಡಿದುಕೊಂಡು ಕುತ್ತಿಗೆಯನ್ನು ಅದುಮಿದರು. ಅದೇ ಸಮಯ ನಾನು ಬೊಬ್ಬೆ ಹಾಕಿದಾಗ ನನ್ನ ತಮ್ಮನ ಹೆಂಡ್ತಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಇಬ್ಬರು ಒಳ ನುಗ್ಗಿದರು. ಆ ಸಮಯ ಮನೆಯಲ್ಲಿದ್ದ ನನ್ನ ತಾಯಿ ಕೂಡಾ ಎಚ್ಚರಗೊಂಡಾಗ ಎಲ್ಲರೂ ಸೇರಿ ನನ್ನನ್ನು ನನ್ನ ತಾಯಿ ಮತ್ತು ತಮ್ಮನ ಹೆಂಡ್ತಿಯನ್ನು ಎಳೆದುಕೊಂಡು ಬಂದು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ದೂಡಿ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿ ನನಗೆ ಕೈಯಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಗದರಿಸಿದರು. ಅಲ್ಲದೇ ನನ್ನ ತಮ್ಮನ ಹೆಂಡ್ತಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಕಿತ್ತುಕೊಂಡರು. ಅಲ್ಲದೇ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ತಾಯಿಯ ಚಿನ್ನದ ಸರ ಮತ್ತು ಒಂದು ಉಂಗುರವನ್ನು ಹಾಗೂ ನಗದು ರೂ 25೦೦೦/- ವನ್ನು ತೆಗೆದುಕೊಂಡರು ಅಲ್ಲದೇ ನನ್ನ ತಮ್ಮನ ಹೆಂಡ್ತಿಯ ಬ್ಯಾಗ್ ನಲ್ಲಿದ್ದ 3 ಮಕ್ಕಳ ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್ , ೫ ಸೆಟ್ ಕಿವಿಯ ಬೆಂಡೋಲೆ, ೩ ಉಂಗುರ,೪ ಬಳೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲದೇ ನನ್ನ ಒಂದು ಮೊಬೈಲ್ ಮತ್ತು ತಮ್ಮ ಹೆಂಡ್ತಿಯ ೨ ಮೊಬೈಲ್ ಸೆಟ್ ಗಳನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿರುತ್ತಾರೆ. ಆರೋಪಿತರುಗಳು ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿರುತ್ತಾರೆ.

ಆರೋಪಿಗಳು 30 ರಿಂದ 35 ಪವನ್ ತೂಕದ ಚಿನ್ನದ ಒಡವೆ ಹಾಗೂ ಸುಮಾರು 1 ಕೆ ಜಿ ತೂಕದ ಬೆಳ್ಳಿ ಒಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು ಒಟ್ಟು ಸುಮಾರು ಚಿನ್ನಾಭರಣ ಹಾಗೂ ನಗದು ಹಣ ಸೇರಿ ಸುಮಾರು 12,40,000/- ರೂ,ಗಳಾಗಬಹುದು ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಪಿ.ಎಸ್.ಐ ಚಂದ್ರಶೇಖರ ರವರು ತಮ್ಮ ಠಾಣಾ ಅ.ಕ್ರ 43/2020 ಕಲಂ 448, 427, 506, 394 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.

ಇದೊಂದು ಘೋರಾಅಪರಾಧ ಪ್ರಕರಣವಾಗಿದ್ದರಿಂದ ಮುಂದಿನ ತನಿಖೆಯನ್ನು ಬೆಳ್ತಂಗಡಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ ಜಿ ರವರು ವಹಿಸಿಕೊಂಡು ತನಿಖೆ ಮುಂದುವರಿಸಿದ್ದು ಬಳಿಕ ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರುಗಳು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದರು ಆರೋಪಿತರುಗಳ ಮತ್ತು ಸೊತ್ತಿನ ಪತ್ತೆ ಆಗದೇ ಇದ್ದುದರಿಂದ ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು ಮಾನ್ಯ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ “ ಸಿ “ ಅಂತಿಮ ವರದಿ ಸಲ್ಲಿಸಿರುತ್ತಾರೆ.

ಮೇ 22 ರಂದು ಸಮಯ ಸುಮಾರು 15.೦೦ ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಅನೀಲಕುಮಾರ್ ರವರಿಗೆ ಪೊಲೀಸ್ ಬಾತ್ಮೀದಾರರಿಂದ ಅಪರಾಧ ಕ್ರಮಾಂಕ; ಅ ಕ್ರ 43/2020 ಕಲಂ:448,427,506,394 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಸಂಶಾಸ್ಪದ ವ್ಯಕ್ತಿಯು ಈ ಪ್ರಕರಣದಲ್ಲಿ ದರೋಡೆಮಾಡಿ ದೋಚಿಕೊಂಡ ಚಿನ್ನ ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆರೋಪಿತ ರಿಯಾಜ್ ಎಂಬಾತನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ; ಅ ಕ್ರ 43/2020 ಕಲಂ:448,427,506,394 ಜೊತೆಗೆ 34 ಐಪಿಸಿ ಯಂತೆ ಪ್ರಕರಣದಲ್ಲಿ ಆರೋಪಿಯೆಂದು ತಪ್ಪು ಒಪ್ಪಿಕೊಂಡಿರುತ್ತಾನೆ. ಮತ್ತು ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ೧)ನವಾಝ್, ಪ್ರಾಯ: ೩೮ ವರ್ಷ, ತಂದೆ: ಯು ಎಸ್ ಇಸ್ಮಾಯಿಲ್, ವಾಸ:ಕೂಳೂರು ಮನೆ, ಮುಂಡಾಜೆ ಗ್ರಾಮ ಬೆಳ್ತಂಗಡಿ ತಾಲೂಕು ೨) ಕೃಷ್ಣ ಪ್ರಾಯ: ೩೭ ವರ್ಷ, ತಂದೆ: ದಿ/ ಬಸಪ್ಪ, ಬೆಂಗಳೂರು ಎಂಬವರು ಧರ್ಮಸ್ಥಳದಲ್ಲಿ ಇರುವುದಾಗಿ ಆಪಾದಿತ ರಿಯಾಜ್ ತಿಳಿಸಿದಂತೆ ಅವರನ್ನು ಕೂಡ ವಶಕ್ಕೆ ಪಡೆದುಕೊಂಡಿರುತ್ತೇವೆ. ಅವರ ಜೊತೆ ಅವರು ಎರಡು ಜನ ಸ್ನೇಹಿತರು ಕೂಡ ಬಾಗಿಯಾಗಿರುವ ಬಗ್ಗೆ ತಿಳಿಸಿರುತ್ತಾರೆ ದಿನಾಂಕ: 26.06.2020 ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿ ದರೋಡೆ ಮಾಡಿ ಚಿನ್ನಾಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗಿರುವ ವಿಚಾರವನ್ನು ದಿನಾಂಕ: 22-05-2024 ರಂದು ಆರೋಪಿತರು ತನ್ನ ಸ್ವ ಇಚ್ಚಾ ಹೇಳಿಕೆಯ ಸಮಯ ಒಪ್ಪಿಕೊಂಡಿರುತ್ತಾರೆ .

ಅದರಂತೆ ಈ ಪ್ರಕರಣದಲ್ಲಿ ಒಟ್ಟು 104 ಗ್ರಾಂ ಬಂಗಾರದ ಆಭರಣಗಳ ಅದರ ಅಂದಾಜು ಮೌಲ್ಯ ಸುಮಾರು 7,87,000 ರೂ/- ಆಗಬಹುದು 288 ಗ್ರಾಂ ಬೆಳ್ಳಿ ಅದರ ಅಂದಾಜು ಮೌಲ್ಯ ಸುಮಾರು 30,240 ರೂ/- ಆಗಬಹುದು , ಟಿವಿಎಸ್ ಕಂಪೆನಿಯ ಅಪಾಚೆ ಮೋಟರ ಬೈಕ್ -1 ಅದರ ಅಂದಾಜು ಮೌಲ್ಯ ಸುಮಾರು 25,೦೦೦/- ಆಗಬಹುದು ಒಟ್ಟು ಮೌಲ್ಯ 8,42,240/- ಆಗಬಹುದು ಹಾಗೂ ವಶಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತೇವೆ ಎಂದು ತಿಳಿಸಿದರು.

ಈ ಪ್ರಕರಣದ ಪತ್ತೆ ಬಗ್ಗೆ ಸಿ.ಬಿ. ರಿಶ್ಯಂತ್ ಪೋಲಿಸ್ ಅದೀಕ್ಷಕರು ,ದ.ಕ ಜಿಲ್ಲೆ, ಹೆಚ್ಚುವರಿ ಪೋಲಿಸ್ ಅದೀಕ್ಷಕರುಗಳಾದ ಎಂ ಜಗದೀಶ್ ಮತ್ತು ರಾಜೇಂದ್ರ ಡಿ ಎಸ್ ಮತ್ತು ಪೋಲಿಸ್ ಉಪಾಧೀಕ್ಷಕರು ಬಂಟ್ವಾಳ ವಿಜಯ ಪ್ರಸಾದ್ ಎಸ್ ರವರ ನಿರ್ದೆಶನದಂತೆ, ವಸಂತ್ ಆರ್ ಆಚಾರ್ ಪೋಲಿಸ್ ವೃತ್ತ ನಿರೀಕ್ಷಕರು ಬೆಳ್ತಂಗಡಿ ಗ್ರಾಮಾಂತರ ವೃತ್ತ ರವರ ಮಾರ್ಗದರ್ಶದಂತೆ ಧರ್ಮಸ್ಥಳ ಪೋಲಿಸ್ ಠಾಣಾ ಪೋಲಿಸ್ ಉಪ-ನಿರೀಕ್ಷಕರುಗಳಾದ ಅನೀಲ್ ಕುಮಾರ ಡಿ, ಸಮರ್ಥ ರ ಗಾಣಿಗೇರ ಹಾಗೂ ಸಿಂಬಂಧಿಗಳಾದ ಹೆಚ್.ಸಿ ರಾಜೇಶ ಎನ್ , ಹೆಚ್.ಸಿ ಪ್ರಶಾಂತ್ ಎಂ , ಹೆಚ್.ಸಿ ಸತೀಶ್ ನಾಯ್ಕ್ , ಮ.ಹೆಚ್.ಸಿ ಪ್ರಮೋದಿನಿ , ಹೆಚ್.ಸಿ ಶೇಖರ್ ಗೌಡ , ಹೆಚ್‌ಸಿ ಕೃಷ್ಣಪ್ಪ, ಆನಿಲ್ ಕುಮಾರ್, ಜಗದೀಶ್, ಮಲ್ಲಿಕಾರ್ಜುನ್, ವಿನಯ್ ಪ್ರಸನ್ನ , ಗೋವಿಂದರಾಜ್, ಭಿಮೇಶ್, ನಾಗರಾಜ್ ಬುಡ್ರಿ ಹಾಗೂ ಹುಲಿರಾಜ್ ಪತ್ತೆ ಕಾರ್ಯಕ್ಕೆ ಸಹಕರಿಸಿರುತ್ತಾರೆ.

Leave a Comment

error: Content is protected !!