ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಉರುವಾಲು: ಇಲ್ಲಿಯ ಮುರತ್ತಕೋಡಿ ನಿವಾಸಿ ಅಕ್ಷಿತ್ ಕುಮಾರ್ (25ವ) ಎಂಬವರು ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೇ 26ರಂದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರಕರಣ ವರದಿಯಾಗಿದೆ.


ಅಕ್ಷಿತ್‌ರವರು ಕಳೆದ ಒಂದುವರೆ ವರ್ಷದಿಂದ ಯಾವಾಗಲಾದರೊಮ್ಮೆ ಹೊಟ್ಟೆ ನೋವು ಎಂದು ಹೇಳುತ್ತಿದ್ದು, ಮೇ 21 ರಂದು ಕುಪ್ಪೆಟ್ಟಿ ಎಂಬಲ್ಲಿ ಗಾರೆ ಕೆಲಸಕ್ಕೆ ಹೋದವನಿಗೆ ಸಂಜೆ ಹೊಟ್ಟೆ ನೋವು ಮತ್ತು ವಾಂತಿ ಪ್ರಾರಂಭವಾಗಿ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಗುಣಮುಖರಾಗಿ ಮನೆಗೆ ಬಂದವನಿಗೆ ಮತ್ತೆ ಹೊಟ್ಟೆ ನೋವು ಪ್ರಾರಂಭವಾಗಿ ಮೇ ೨೩ರಂದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ಹೆಚ್ಚಿನ ಚಿಕಿತ್ಸೆಗಾಗಿ ಮೇ ೨೫ರಂದು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಕೆ.ಎಂ.ಸಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯಲ್ಲಿದ್ದ ಸಮಯ ವೈದ್ಯರು ಯಾವುದೋ ವಿಷದ ಅಂಶದಿಂದ ಈ ರೀತಿ ಉಂಟಾಗಿದ್ದೆಂದು ತಿಳಿಸಿ ಚಿಕಿತ್ಸೆ ಕೊಡುತ್ತಿದ್ದರು. ಚಿಕಿತ್ಸೆಯಲ್ಲಿದ್ದ ಅಕ್ಷಿತ್ ಚಿಕಿತ್ಸೆ ಫಲಕಾರಿಯಾಗದೇ ಮೇ 26ರಂದು ರಾತ್ರಿ ಮೃತಪಟ್ಟಿದ್ದು, ಈ ಬಗ್ಗೆ ಮೃತರ ಸಹೋದರ ಪುನಿತ್ ಕುಮಾರ್ ಜಿ. ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Comment

error: Content is protected !!