ಧರ್ಮಸ್ಥಳ :ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆ ಧರ್ಮಸ್ಥಳದಲ್ಲಿ ಮೇ 31ರಂದು ಶಾಲಾ ಆರಂಭೋತ್ಸವ ಕಾರ್ಯಕ್ರಮ ಜರಗಿತು.
ಉದ್ಘಾಟಕರಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಿ ಬಾಲಕೃಷ್ಣ ಪೂಜಾರಿಯವರು ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
” ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಕೇವಲ ಅಂಕಗಳ ಮಾನದಂಡವನ್ನು ಮಾತ್ರ ಪರಿಗಣಿಸದೆ ವಿದ್ಯಾರ್ಥಿಗಳು ಮೈಗೂಡಿಸಿಕೊಂಡಂತಹ ಸಂಸ್ಕಾರಯುತ ಮೌಲ್ಯಗಳನ್ನು ಕೂಡ ಪರಿಗಣಿಸಿ ಅಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳು ನಡೆಯಬೇಕು” ಮೌಲ್ಯಾಧಾರಿತ ಶಿಕ್ಷಣದ ಮೂಲಕ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯೋಪಾಧ್ಯಾಯರಾದ ಎನ್ ಪದ್ಮರಾಜು ಅವರು ಅಧ್ಯಕ್ಷೀಯ ನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಚಿತವಾಗಿ ವಿತರಿಸಿದ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಅತಿಥಿಗಳು ವಿತರಿಸಿದರು. ಕನ್ನಡ ಶಿಕ್ಷಕರಾದ ಯುವರಾಜರವರು ಸ್ವಾಗತಿಸಿ, ಶಿಕ್ಷಕಿ ಭವ್ಯ ಹೆಗಡೆ ನಿರೂಪಿಸಿ, ಶಿಕ್ಷಕಿ ಶ್ರೀಮತಿ ದಿವ್ಯ ಧನ್ಯವಾದವಿತ್ತರು.