ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿದ್ಯಾರ್ಥಿ ಕವಿಗೋಷ್ಠಿ ಜರಗಿತು.
ಹಿರಿಯ ಶಿಕ್ಷಕಿ ಶ್ರೀಮತಿ ರಾಜಶ್ರೀಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡಿ. ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಸ್ವಾಮಿ ಕೆ. ಎ. ಯವರು ಮಾತನಾಡುತ್ತಾ, ಪರಿಸರ ಸಂರಕ್ಷಣೆಯ ಪ್ರಜ್ಞೆ ನಮ್ಮಲ್ಲಿ ಮೂಡಬೇಕು. ಇಂದಿನ ಜಾಗತಿಕೀಕರಣದ ವಿದ್ಯಮಾನಗಳಿಂದ ಪರಿಸರವು ನಾಶವಾಗುತ್ತಿದೆ. ನಮ್ಮ ಅಳಿವು ಉಳಿವಿನಲ್ಲಿ ಪರಿಸರದ ಉಳಿವಿನಲ್ಲಿದೆಯೆಂದು ವಿದ್ಯಾರ್ಥಿಗಳು ಚಿಂತನೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಶ್ವ ಪರಿಸರದ ವಿಶೇಷತೆ ಬಗ್ಗೆ ವಿದ್ಯಾರ್ಥಿಗಳ ಪರವಾಗಿ ಕು. ಲಿಖಿತಾ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ವಿವಿಧ ವಿಷಯಗಳಲ್ಲಿ ಏರ್ಪಡಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅನಂತರ ವಿದ್ಯಾರ್ಥಿ ಕವಿಗೋಷ್ಠಿ ಜರಗಿತು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲ ಮತ್ತು ಕಾರ್ಯಕ್ರಮದ ಸಂಯೋಜಕರಾದ ಶಿಕ್ಷಕಿ ಶ್ರೀಮತಿ ಕೋಕಿಲಾರವರು ಉಪಸ್ಥಿತರಿದ್ದು. ವಿದ್ಯಾರ್ಥಿಗಳಾದ ವಂಶಿತ್ ಸ್ವಾಗತಿಸಿ ಸಮೀಕ್ಷಾ ವಂದಿಸಿದರು, ಇಂದುಮತಿ ನಿರೂಪಿಸಿದರು.













