ಹೊಸಪಟ್ಣ ಸ.ಕಿ.ಪ್ರಾ. ಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya

ವೇಣೂರು: ಪ್ಲಾಸ್ಟಿಕ್‌ಗಳನ್ನು ಸುಟ್ಟರೆ ಆರೋಗ್ಯದ ಮೇಲೆ ತುಂಬಾ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಪರಿಸರಕ್ಕಾಗಿ ನಾವು ಬಳಗದ ಪ್ರೇಮಾನಂದ ಕಲ್ಮಾಡಿಯವರು ಹೇಳಿದರು.

ಅವರು ಪರಿಸರಕ್ಕಾಗಿ ನಾವು ಎನ್ನುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಘಟನೆ, ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಹೊಸಪಟ್ಣ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಹೊಸಪಟ್ಣ, ಶ್ರೀ ಧರ್ಮಸ್ಥಳ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಹೊಸಪಟ್ಣ, ಹಾಲು ಉತ್ಪಾದಕರ ಸಹಕಾರ ಸಂಘ ಹೊಸಪಟ್ಣ, ಗ್ರಾಮ ಪಂಚಾಯತಿ ವೇಣೂರು, ಶಾಲಾಭಿವೃದ್ಧಿ ಸಮಿತಿ ಹೊಸಪಟ್ಣ ಇವುಗಳ ಸಹಭಾಗಿತ್ವದಲ್ಲಿ ಜೂ.9ರಂದು ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ ವಿದ್ಯಾರ್ಥಿಗಳೊಂದಿಗೆ ಗ್ರಾಮಸ್ಥರು, ಶಾಲೆಯ ಮೊದಲಿನ ವಿದ್ಯಾರ್ಥಿಗಳು ಕೂಡ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಪರಿಕಲ್ಪನೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಮತ್ತು ಸದಸ್ಯ ಸತೀಶ್ ರವರು ಶಾಲಾ ಪರಿಸರದಲ್ಲಿ ತೆಂಗಿನ ಸಸಿಯನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಅಂಗಳದಲ್ಲಿ ವಿಶಾಲವಾಗಿ ಹಬ್ಬಿ ನಿಂತಿರುವ ಮರಗಳನ್ನು ನೆಟ್ಟು ಬೆಳೆಸಿದ ದಿ. ಸುಂದರ ಪೂಜಾರಿಯವರ ಬಗ್ಗೆ ಸ್ಥಳೀಯರಾದ ಭಾಸ್ಕರರವರು ಮಕ್ಕಳಿಗೆ ಪರಿಚಯಿಸುವ ಮೂಲಕ ಗಿಡಮರಗಳನ್ನು ಬೆಳೆಸಲು ಒಲವು ಮೂಡಿಸುವ ಪ್ರಯತ್ನ ಮಾಡಿದರು. ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿ, ಬಜಿರೆ ಕ್ಲಸ್ಟರ್‌ನ ಸಿ.ಆರ್.ಪಿ. ರಾಜೇಶ್ ಮಕ್ಕಳಲ್ಲಿ ಸ್ವಚ್ಛತೆಯ ಪ್ರಜ್ಞೆಯನ್ನು ಬೆಳೆಸುವ ಬಗ್ಗೆ ಪೋಷಕರಿಗೆ ಕಿವಿಮಾತು ಹೇಳಿದರು.
ಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಹಸಿರೇ ಉಸಿರು, ನೀರನ್ನು ಮಿತವಾಗಿ ಬಳಸಿ, ಇರುವುದೊಂದೇ ಭೂಮಿ ಇತ್ಯಾದಿ ಪರಿಸರಪರ ಘೋಷಣೆಗಳನ್ನು ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಹೇಳಿದ ರೀತಿಗೆ ನೆರೆದ ಮಂದಿ ತಲೆದೂಗಿದರು.
ನಾಗಬನಗಳನ್ನು ಮೂಲ ನೈಸರ್ಗಿಕ ರೂಪದಲ್ಲಿ ಉಳಿಸಿಕೊಳ್ಳುವಿಕೆ, ಅಂತರ್ಜಲದ ಮಟ್ಟ ಕಾಪಾಡಿಕೊಳ್ಳುವಿಕೆ ಇತ್ಯಾದಿ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಪ್ರೇಮಾನಂದ ಕಲ್ಮಾಡಿಯವರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಮುಂದಿನ ವರ್ಷದ ಪರಿಸರ ದಿನದ ಮೊದಲಾಗಿ ಹೊಸಪಟ್ಣ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ರೂಪುರೇಷೆ ಹಾಕಿಕೊಳ್ಳುವಂತೆ ಕರೆ ನೀಡಿದರು.

ವೇಣೂರು ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಶಾಲೆಯಲ್ಲಿ ಇಂತಹ ಸಮುದಾಯ ಜಾಗೃತಿಯ ಕಾರ್ಯಕ್ರಮಗಳು ಬಹಳ ಉಪಯುಕ್ತ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಇದರ ಅಧ್ಯಕ್ಷ ಪ್ರವೀಣ್ ಪೂಜಾರಿ ಜಾರಿಗೆದಡಿ, ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್ ಮೇರು, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ರಂಜಿತ್ ಜಾರಿಗೆದಡಿ, ಗೌರವಾಧ್ಯಕ್ಷ ದೇಜಪ್ಪ ಮೂಲ್ಯ ಶಾಂತಿರೊಟ್ಟು, ಹೊಸಪಟ್ಣ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಪರಾರಿ, ಶಾಲಾಭಿವೃದ್ಧಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಗೋಪಾಲ್ ಪೂಜಾರಿ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ ಮತ್ತು ಉಪಾಧ್ಯಕ್ಷೆ ಶಾರದಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡ ಪ್ರೇಮಾನಂದ ಕಲ್ಮಾಡಿಯವರಿಗೆ ಶಾಲಾ ಪರವಾಗಿ ಸ್ಮರಣಿಕೆಯನ್ನಿತ್ತು ಗೌರವಿಸಿದರು

ಹೊಸಪಟ್ಣ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ವಿದ್ಯಾ ಕಾರ್ಕಳ ಸ್ವಾಗತಿಸಿ ವಂದಸಿದರು. ಗೌರವ ಶಿಕ್ಷಕಿ ಭವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!