ಕೆಪಿಎಸ್ ಪುಂಜಾಲಕಟ್ಟೆ: ಆಟಿ ತಿಂಗೊಲ್ಡ್ ಜೋಕ್ಲೆ ಗೇನ

Suddi Udaya

“ಇಂದಿನ ದಿನಗಳಲ್ಲಿ ಹಳೆಯ ವಿಚಾರಧಾರೆಗಳು ಮರೆತು ಹೊಸ ವಿಚಾರಗಳತ್ತ ನಾವೆಲ್ಲರೂ ದಾಪುಗಾಲು ಹಾಕುತ್ತಿದ್ದೇವೆ. ಇದು ಖಂಡಿತವಾಗಿಯೂ ವಿದ್ಯಾರ್ಥಿಗಳ ಹಾಗೂ ನಮ್ಮ ಭವಿಷ್ಯದ ದೃಷ್ಟಿಯಲ್ಲಿ ಉತ್ತಮವಲ್ಲ. ಇದರ ಬದಲು ಹಳೆಯ ಕಾಲದ ಆಚಾರ ವಿಚಾರಗಳನ್ನು ಮರೆಯದೆ , ಇಂದಿನ ಕಾಲದ ಉತ್ತಮ ವಿಚಾರಗಳನ್ನು ಇದರೊಂದಿಗೆ ಸೇರ್ಪಡೆಗೊಳಿಸಿ ನಾವು ನಡೆದರೆ ನಮ್ಮೆಲ್ಲರ ಬದುಕು ಉತ್ತಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ ಕಾರ್ಯವನ್ನು ನಾವೆಲ್ಲರೂ ಜೊತೆ ಸೇರಿ ಇಂದಿನ ಮಕ್ಕಳಲ್ಲಿ ಬೆಳೆಸಿದಾಗ ಆ ಮಕ್ಕಳು ಆ ವಿಚಾರವನ್ನು ತಮ್ಮ ಬದುಕಿನಲ್ಲಿ ಖಂಡಿತವಾಗಿಯೂ ಆಚರಿಸುವುದರೊಂದಿಗೆ ಇನ್ನೊಬ್ಬರಿಗೆ ತಿಳಿ ಹೇಳುವ ಕಾರ್ಯವನ್ನು ಮಾಡಿಯೇ ಮಾಡುತ್ತಾರೆ.

ಅಂತಹ ಒಂದು ಮಹತ್ತರವಾದ ಕಾರ್ಯ ಇಂದು ಈ ಸಂಸ್ಥೆಯಲ್ಲಿ ನಡೆಯುತ್ತಿರುವುದು ಖಂಡಿತವಾಗಿಯೂ ಪ್ರತಿಯೊಬ್ಬರು ಪ್ರೋತ್ಸಾಹಿಸಲೇಬೇಕಾದ ವಿಚಾರವಾಗಿದೆ ” ಎಂದು‌ ರಾಜ್ಯಮಟ್ಟದ ಯುವಜನ ಪ್ರಶಸ್ತಿ ವಿಜೇತ ಜಯರಾಮ್ ಮುಂಡಾಜೆಯವರು ಹೇಳಿದರು.

ಅವರು ಕೆಪಿಎಸ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಮಡಂತ್ಯಾರು, ಲಯನ್ಸ್ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ‌ಮಡಂತ್ಯಾರು, ಜೆಸಿಐ ಮಡಂತ್ಯಾರು, ಬಸವೇಶ್ವರ ದೇವಸ್ಥಾನ ಬಸವನಗುಡಿ ಪುಂಜಾಲಕಟ್ಟೆ, ಮುರುಘೇಂದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ, ಶಾರದಾಂಬ ಭಜನಾ ಮಂಡಳಿ ಪುಂಜಾಲಕಟ್ಟೆ, ಹಿರಿಯ ವಿದ್ಯಾರ್ಥಿಗಳ ಸಂಘ ಕೆಪಿಎಸ್ ಪುಂಜಾಲಕಟ್ಟೆ, ಈ ಎಲ್ಲಾ ಸಂಸ್ಥೆಗಳು ಅದರೊಂದಿಗೆ ಮಡಂತ್ಯಾರಿನ ಉದ್ಯಮಿ ಹೈದರ್ ಇವರುಗಳ ಸಹಕಾರದೊಂದಿಗೆ ಜುಲೈ 27ರಂದು ‌ ಕೆಪಿಎಸ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಆಟಿ ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಮಡಂತ್ಯಾರಿನ ಅಧ್ಯಕ್ಷರಾದ ಶ್ರೀಮತಿ ರೂಪಾ ನವೀನ್ ಕೂಡ್ಲಕ್ಕೆ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ಕಾರ್ಯಕ್ರಮದ ಉದ್ಘಾಟನೆಯ ಪೂರ್ವಭಾವಿಯಾಗಿ ಹಳೆ ಕಾಲದ ನೆನಪುಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಗಣ್ಯರೆಲ್ಲರೂ ಸೇರಿ ದೀಪ ಪ್ರಜ್ವಲನಗೊಳಿಸಿ, ಪಾಡ್ದನ ದೊಂದಿಗೆ ಸೇಸೆ ಕಾರ್ಯಕ್ರಮ ನಡೆಸಿ,ಚೆನ್ನೆಮಣೆ ಆಟ ಆಡುವುದರೊಂದಿಗೆ ಉದ್ಘಾಟಿಸಿದರು.

ಆ ಬಳಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಡಂತ್ಯಾರಿನ ಅಧ್ಯಕ್ಷರಾದ ಶ್ರೀಮತಿ ರೂಪಾ ನವೀನ ಕೂಡ್ಲಕ್ಕೆ, ಜಿಸಿಐ ಮಡಂತ್ಯಾರ್ ಅಧ್ಯಕ್ಷ ವಿಕೇಶ್ ಮಾನ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಮಪ್ರಸಾದ್ ಸಂಪಿಗೆ ತಾಯ, ಮುರುಘೇಂದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ ಅಧ್ಯಕ್ಷ ನವೀನ್ ಶೆಟ್ಟಿ, ಶಾರದಾಂಬ ಭಜನಾ ಮಂಡಳಿ ಪುಂಜಾಲಕಟ್ಟೆ ಅಧ್ಯಕ್ಷ ಬಾಲಕೃಷ್ಣ ನಾಯಕ್, ಕೆಥೋಲಿಕ್ ಸಭಾ ಮಡಂತ್ಯಾರ್ ಅಧ್ಯಕ್ಷೆ ಸೇಲೆಸ್ತೀನಿ ಡಿಸೋಜ, ಶ್ರೀ ಬಸವೇಶ್ವರ ದೇವಸ್ಥಾನ ಬಸವನಗುಡಿ ಪುಂಜಾಲಕಟ್ಟೆಯ ಆಡಳಿತ ಸಮಿತಿಯ ಅಧ್ಯಕ್ಷ ಪ್ರಶಾಂತ್ ಎಂ, ಪುಂಜಾಲಕಟ್ಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಸರೋಜಿನಿ ಆಚಾರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರಾದ ಸುರೇಶ್ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದ್ಮನಾಭ ಇವರೆಲ್ಲರೂ ಉರಿಯುತ್ತಿರುವ ಹಣತೆಯನ್ನು ತಂದು ವೇದಿಕೆಯ ಮುಂಬಾಗದಲ್ಲಿರುವ ದೀಪ ಮಂಟಪದಲ್ಲಿಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮಯೋಚಿತವಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರೆ, ಶಿಕ್ಷಕಿ ಶ್ರೀಮತಿ ಜಯಂತಿ ಕೆ ಸರ್ವರನ್ನು ಸ್ವಾಗತಿಸಿದರೆ, ಸಂಸ್ಥೆಯ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಶಿಕ್ಷಕ ಹರಿಪ್ರಸಾದ್ ಆರ್ ಧನ್ಯವಾದ ಸಲ್ಲಿಸಿದರೆ, ಜನಪದ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಣೆಯನ್ನು ಧರಣೇಂದ್ರ ಕೆ ನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ ವಿಶೇಷವೆಂದರೆ ನವ್ಯ ರೀತಿಯ ಉದ್ಘಾಟನೆ, 12 ತುಳು ತಿಂಗಳುಗಳ ಮಹತ್ವವನ್ನು ಸಾರುವ ನೃತ್ಯ ಸಿಂಚನ, ಹಳೆ ಕಾಲದ ನೆನಪನ್ನು ಮತ್ತೆ ನೆನಪಿಸುವ ವಸ್ತು ಪ್ರದರ್ಶನ, ಜಿಲ್ಲೆಯ ಪ್ರಸಿದ್ಧ 40 ಯಕ್ಷಪಟುಗಳಿಂದ ಕೋಟಿ ಚೆನ್ನಯ್ಯ ತಾಳ ಮದ್ದಲೆ, ಆಷಾಢ ತಿಂಗಳಲ್ಲಿ ತಿನ್ನುವ ಆಹಾರಗಳ ಸವಿಯುವ ಸುಂದರ ಕ್ಷಣ ಇವೆಲ್ಲವೂ ಸರ್ವರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

Leave a Comment

error: Content is protected !!