ಕೊಕ್ಕಡ: ಕೊಕ್ಕಡ ಸೌತಡ್ಕ ದೇವಸ್ಥಾನ ಇತ್ತಿಚೇಗಿನ ದಿನಗಳಲ್ಲಿ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಿದ್ದು, ಇದೀಗ ದೇವಸ್ಥಾನದ ಸಮೀಪ ಕೆಲ ವರ್ಷಗಳಿಂದ ಅಂಗಡಿ ವ್ಯವಹಾರನ್ನು ನಡೆಸುತ್ತಿರುವ ಕೆಲ ಅಂಗಡಿಯವರಿಗೆ ಕಂದಾಯ ಇಲಾಖೆ ನೋಟೀಸು ಜಾರಿಗೊಳಿಸಿ ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ.
ಕೊಕ್ಕಡದ ಸೌತಡ್ಕ ದೇವಸ್ಥಾನಕ್ಕೆ ಸಂಬಂಧಿಸಿದಂತೆ ನೂತನ ವ್ಯವಸ್ಥಾಪನಾ ಸಮಿತಿ ರಚನೆ, ಗಂಟೆ ಹಗರಣ, ಟ್ರಸ್ಟ್ ಹೆಸರಲ್ಲಿ ಜಾಗ ಖರೀದಿ ಮೊದಲಾದ ವಿಷಯಗಳಲ್ಲಿ ಕಳೆದ ಕೆಲ ಸಮಯಗಳಿಂದ ಎರಡು ಕಡೆಯವರಿಂದ ಪರಸ್ಪರ ಆರೋಪ, ಪ್ರತ್ಯಾರೋಪಗಳು, ದೂರು, ಪ್ರತಿದೂರುಗಳು ನಡೆಯುತ್ತಿದೆ. ದೇವಸ್ಥಾನದ ಬಳಿಯಲ್ಲಿ ಇರುವುದು ಸರಕಾರಿ ಜಾಗ ಎಂಬ ಬಗ್ಗೆ ಒಂದು ಕಡೆಯವರ ಆರೋಪದಂತೆ ಕಂದಾಯ ಮತ್ತು ಸರ್ವೆ ಇಲಾಖೆ ಜಾಗದ ಸರ್ವೆ ನಡೆಸಿ, ಇದೀಗ ಅಲ್ಲಿ ಅಂಗಡಿ ಹೊಂದಿರುವವರಿಗೆ ನೋಟೀಸು ಜಾರಿ ಮಾಡಿದೆ.
ನೋಟೀಸಿನಲ್ಲಿ ಏನಿದೆ…?
ಕೊಕ್ಕಡ ಹೋಬಳಿ ಕೊಕ್ಕಡ ಗ್ರಾಮದ ಸ.ನಂ.೨೧೫/೧ ರಲ್ಲಿ ಸರ್ಕಾರಿ ಜಮೀನಿನಲ್ಲಿ ತಾವು ಸ್ವಾಧೀನ ಹೊಂದಿ ಅನಧಿಕೃತವಾಗಿ ಒತ್ತುವರಿ ಮಾಡಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಲಾಭದಾಯಕವಾದ ವ್ಯಾಪಾರ ನಡೆಸುತ್ತಿದ್ದೀರಿ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪ್ರವರ್ಗ ಎ ದೇವಸ್ಥಾನವಾಗಿದ್ದು ದಿನಂಪ್ರತಿ ನೂರಾರು ಭಕ್ತರು ಬರುತ್ತಿದ್ದಾರೆ. ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿರುವುದರಿಂದ ಭಕ್ತಾಧಿಗಳಿಗೆ ಮತ್ತು ಸಾರ್ವಜನಿಕರಿಗೆ, ಪಾರ್ಕಿಂಗ್ ವ್ಯವಸ್ಥೆಗೆ, ವಾಹನ ಸಂಚಾರಕ್ಕೆ, ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಆದುದರಿಂದ ಈ ನೋಟೀಸು ತಲುಪಿದ ೧೦ ದಿನಗಳ ಒಳಗೆ ತಾವು ಮಾಡಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಬೇಕು. ತೆರವುಗೊಳಿಸದೆ ಇದ್ದಲ್ಲಿ ಕಂದಾಯ ಕಾಯ್ದೆಯಂತೆ ಇಲಾಖಾ ವತಿಯಿಂದ ತೆರವುಗೊಳಿಸಲಾಗುವುದು ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರಿ ಬಾಕಿ ಎಂದು ಪರಿಗಣಿಸಿ ನಿಮ್ಮಿಂದ ವಸೂಲು ಮಾಡಲಾಗುವುದು ಎಂದು ನೋಟೀಸ್ನಲ್ಲಿ ತಿಳಿಸಲಾಗಿದೆ.
ಅನಧಿಕೃತ ಒತ್ತುವರಿ ಮಾಡಿಕೊಂಡಿರುವುದರ ಕುರಿತಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ ೧೯೨/ಎ ರಡಿಯಲ್ಲಿ ನಿಮ್ಮ ಮೇಲೆ ಏಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬಾರದೆನ್ನುವುದರ ಬಗ್ಗೆ ಹಾಜರಾಗಿ ಲಿಖಿತವಾಗಿ ಹೇಳಿಕೆ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ನೋಟೀಸಿನಲ್ಲಿ ಎಚ್ಚರಿಕೆ ನೀಡಲಾಗಿದೆ.