23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳಕ್ಕೆ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಎಂ.ಬಿ.ಎ. ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

ಧರ್ಮಸ್ಥಳ: ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಎಂ.ಬಿ.ಎ. ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳು ಫೆ.27 ರಂದು ಧರ್ಮಸ್ಥಳಕ್ಕೆ ಬಂದು ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಶಿಸ್ತುಬದ್ಧವಾಗಿ ನಡೆಯುತ್ತಿರುವ ಬಹುಮುಖಿ ಸೇವಾಚಟುವಟಿಕೆಗಳನ್ನು ಕುತೂಹಲ ಮತ್ತು ಆಸಕ್ತಿಯಿಂದ ವೀಕ್ಷಿಸಿ ಅಪೂರ್ವ ಅನುಭವ ಪಡೆದರು. ವಿಶೇಷವಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ತಮ್ಮ ಅನೇಕ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ಪಡೆದರು.

ಇತ್ತೀಚೆಗೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಉದ್ಘಾಟಿಸಿದ ದೇವರ ದರ್ಶನಕ್ಕಾಗಿ “ಶ್ರೀ ಸಾನ್ನಿಧ್ಯ’’ ಸರದಿಸಾಲಿನ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಆಸಕ್ತಿಯಿಂದ ವೀಕ್ಷಿಸಿ, ಗಮನಿಸಿ ಸಂತೋಷ ಮತ್ತು ಅಚ್ಚರಿ ವ್ಯಕ್ತಪಡಿಸಿದರು. ಭಕ್ತಾದಿಗಳ ಅನುಕೂಲಕ್ಕಾಗಿ ಶೀಘ್ರ ದೇವರ ದರ್ಶನಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅಳವಡಿಸಿದ ಸೌಲಭ್ಯ, ಸವಲತ್ತುಗಳ ಬಗ್ಗೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.


“ಅನ್ನಪೂರ್ಣ’’ ಭೋಜನಾಲಯದಲ್ಲಿ ಪ್ರತಿದಿನ ಸರಾಸರಿ 50,000 ಮಂದಿ ಭಕ್ತಾದಿಗಳಿಗೆ ಶುಚಿ-ರುಚಿಯಾದ ಸರಳ ಸಾತ್ವಿಕ ಆಹಾರ-ಅನ್ನ, ಸಾರು, ಸಾಂಬಾರು, ಮಜ್ಜಿಗೆ ಹಾಗೂ ಕುಡಿಯುವ ನೀರು ಎಲ್ಲವನ್ನೂ ಸ್ವಚ್ಛತೆಯೊಂದಿಗೆ ಬಳಸುವ ವಿಧಾನ, ಶಿಸ್ತು ಮತ್ತು ಊಟ ಮಾಡಿದ ಹಾಳೆತಟ್ಟೆ, ಬಾಳೆ ಎಲೆ ಇತ್ಯಾದಿಗಳ ನಿರ್ವಹಣೆ, ಅಡುಗೆ ಕೋಣೆಯಲ್ಲಿ ಬಳಸಿದ ನೀರನ್ನು ಶುದ್ಧೀಕರಿಸಿ ಮುಳಿಕ್ಕಾರು ತೋಟದ ಗಿಡಗಳಿಗೆ ಬಳಕೆ ಇತ್ಯಾದಿ ಬಗ್ಗೆ ವಿದ್ಯಾರ್ಥಿಗಳು ಸಮಗ್ರ ಮಾಹಿತಿ ಕಲೆ ಹಾಕಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ ಹಾಗೂ ಕುತೂಹಲಕಾರಿ ಪ್ರಶ್ನೆಗಳಿಗೆ ಪೂಜ್ಯರ ಸಮರ್ಪಕ ಉತ್ತರದಿಂದ ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸಿದರು.
ಅನ್ನದಾನ, ವಿದ್ಯಾದಾನ, ನ್ಯಾಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನಗಳ ಪರಂಪರೆ ಮತ್ತು ಮಾಹಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರು. `ನೋಡಿ ತಿಳಿ, ಮಾಡಿ ಕಲಿ’’ ತತ್ವವನ್ನು ಇಲ್ಲಿ ಪ್ರತ್ಯಕ್ಷವಾಗಿ ಅನುಭವಿಸಿದರು.


ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ, ಕಲೆ, ಸಂಸ್ಕೃತಿ, ಪರಂಪರೆಯ ಸಂರಕ್ಷಣೆಯೊಂದಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ವಿದ್ಯಾರ್ಥಿಗಳಿಗೂ, ಪ್ರೊಫೆಸರುಗಳಿಗೂ ಹೊಸ ಅಪೂರ್ವ ಅನುಭವವನ್ನು ನೀಡಿತು. ಪ್ರಾಚೀನ ಸಂಸ್ಕೃತ ಮತ್ತು ಪರಂಪರೆಯ ಸಂರಕ್ಷಣೆಯೊಂದಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಯಶಸ್ವಿ ಬಳಕೆಯೊಂದಿಗೆ ಧರ್ಮಸ್ಥಳದ ಜನಮಂಗಳ ಕಾರ್ಯಗಳನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದ ಎಂ.ಬಿ.ಎ. ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳು “ಅಯ್ಯಯ್ಯ, ಎಂಚ ಪೊರ್ಲಾಂಡ್’’ ಎಂದು ಅಚ್ಚರಿ ಮತ್ತು ಸಂತೋಷ ವ್ಯಕ್ತಪಡಿಸಿದರು.


ಕಾಲೇಜಿನ ಪ್ರಾಧ್ಯಾಪಕರುಗಳಾದ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಶರಣ್‌ಕುಮಾರ್ ಶೆಟ್ಟಿ ಹಾಗೂ ಪ್ರೊ. ದಿಶಾ ಸಿ. ಶೆಟ್ಟಿ, ಪ್ರೊ. ಕೀರ್ತನ್ ದೀಕ್ಷಿತ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರ್ಮಸ್ಥಳಕ್ಕೆ ಅಧ್ಯಯನ ಪ್ರವಾಸದಲ್ಲಿ ಬಂದು ಅದ್ಭುತ ಅನುಭವ ಪಡೆದರು.

Related posts

ವೇಣೂರಿನಲ್ಲಿ ಶ್ರೀಕೃಷ್ಣ ಮಾರ್ಟ್ ಶುಭಾರಂಭ

Suddi Udaya

ಎಕ್ಸೆಲ್ ಕಾಲೇಜಿನ ಸಿ.ಎ ಮತ್ತು ಸಿ.ಎಸ್ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಕಾರು – ಬೈಕ್ ಅಪಘಾತ: ಬೈಕ್ ಸವಾರ ನಾವೂರಿನ ಚಂದ್ರಹಾಸ ಮೃತ್ಯು

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ಡಾ| ಡಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಪ್ರಯುಕ್ತ ಗೌರವಾರ್ಪಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂವಿಧಾನ ದಿನಾಚರಣೆ

Suddi Udaya

ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ

Suddi Udaya
error: Content is protected !!