ಉಜಿರೆ: ಕಳೆದ 13 ವರ್ಷಗಳಿಂದ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ| ಬಾಲಕೃಷ್ಣ ಭಟ್, ಹಾಗೂ ಡಾ| ಕಮಲಾ ಭಟ್ ಇವರು ವಯೋಸಹಜ ಸಮಸ್ಯೆಗಳಿಂದಾಗಿ ಸೇವಾ ನಿವೃತ್ತಿ ಪಡೆದರು.
ಸೇವಾ ನಿವೃತ್ತಿ ಪಡೆದ ಡಾ| ಬಾಲಕೃಷ್ಣ ಭಟ್ ಮತ್ತು ಡಾ| ಕಮಲಾ ಭಟ್ ಇವರ ಅತ್ಯುತ್ತಮ ಸೇವೆಯನ್ನು ಗೌರವಿಸಿ, ಬೀಳ್ಕೊಡುಗೆ ನೀಡುತ್ತಾ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿದರು. ಜನಸೇವೆಯ ಉದ್ದೇಶದೊಂದಿಗೆ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಹರ್ಷೇಂದ್ರ ಕುಮಾರ್ ಹಾಗೂ ಹೆಗ್ಗಡೆ ಪರಿವಾರದವರ ಸಹಕಾರದಲ್ಲಿ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಸಮಯದ ಬಗ್ಗೆ ಚಿಂತಿಸಿದೆ, ರೋಗಿಯ ಆರೈಕೆಯಲ್ಲಿಯೇ ತಮ್ಮ ಬದುಕಿನ ಅತೀ ಹೆಚ್ಚಿನ ಸಮಯವನ್ನು ಕಳೆದವರು ಇವರು. ತಮ್ಮ ಇಳಿವಯಸ್ಸಿನಲ್ಲಿಯೂ ರೋಗಿಗಳ ಹಿತವನ್ನೇ ಭಯಸಿದ ಇವರ ಸೇವೆ ಈ ಆಸ್ಪತ್ರೆಗೆ ಅತ್ಯುತ್ತಮ ಕೊಡುಗೆಯಾಗಿದೆ ಎಂದರು.
ನಿವೃತ್ತರಾದ ಡಾ| ಬಾಲಕೃಷ್ಣ ಭಟ್ ಮಾತನಾಡಿ, ದೇವಮಾನವರಾದ ಪೂಜ್ಯ ಹೆಗ್ಗಡೆಯವರ ಸಂಸ್ಥೆಯಲ್ಲಿ ವೈದ್ಯಕೀಯ ಸೇವೆ ಮಾಡುವ ಸದಾವಕಾಶ ನಮಗೆ ದೊರೆತಿದೆ. ಇದಕ್ಕಾಗಿ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ವಯೋ ಸಹಜ ಸಮಸ್ಯೆಯಿಂದ ನಿವೃತ್ತಿ ಪಡೆಯುತ್ತಿದ್ದು, ವೈದ್ಯಕೀಯ ಸೇವಾ ಬದುಕಿನಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ರೋಗಿಗಳ ಸೇವೆ ಮಾಡಿದ ಸಂತೃಪ್ತಿ ನಮಗಿದೆ. ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ಸಮರ್ಥ ನಾಯಕತ್ವದಲ್ಲಿ ಜನಪ್ರಿಯಗೊಂಡಿರುವ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯವೃಂದ, ನುರಿತ ದಾದಿಯರು, ಒಳ್ಳೆಯ ಸಿಬ್ಬಂದಿಗಳೊಂದಿಗೆ ಸೇವೆ ಮಾಡಿದ್ದು, ಎಲ್ಲರೂ ನಮಗೆ ಸದಾ ಸ್ಮರಣೀಯರು ಎಂದರು.
ಡಾ| ಚಿನ್ಮಯ್ ಇವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಧೀರ್ಘಕಾಲದ ಅನುಭವ ಹೊಂದಿರುವ ಮತ್ತು ತಮ್ಮ ಇಳಿವಯಸ್ಸಿನಲ್ಲಿಯೂ ಲವಲವಿಕೆ ಮತ್ತು ಸದಾ ಚಟುವಟಿಕೆಯಲ್ಲಿರುವ ಇವರಿಬ್ಬರೂ ಕೂಡ ನಮ್ಮಂತಹ ವೈದ್ಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಮಾತನಾಡಿ, ತಮ್ಮ ವೈದ್ಯಕೀಯ ವೃತ್ತಿ ಜೀವನದಲ್ಲಿ ಅಪಾರ ಅನುಭವ ಹೊಂದಿರುವ ಡಾ| ಬಾಲಕೃಷ್ಣ ಭಟ್, ಮೆಡಿಸಿನ್ ವಿಭಾಗದಲ್ಲಿದ್ದರೂ ಮೂಳೆಚಿಕಿತ್ಸೆ, ಮಕ್ಕಳ ಚಿಕಿತ್ಸೆಯಲ್ಲಿಯೂ ಪರಿಣತಿ ಪಡೆದಿದ್ದರು. ಡಾ| ಕಮಲಾ ಭಟ್ ತಮ್ಮ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.
ಇನ್ಸೂರೆನ್ಸ್ ವಿಭಾಗದ ಜಗನ್ನಾಥ್ ನಿರೂಪಿಸಿದರು. ವೈದ್ಯರು, ದಾದಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.