ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಮೇ 25 ರಂದು ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಆರನೆಯ ಅಧ್ಯಾಯದ ಕಾರ್ಯಕ್ರಮವು ನಡೆಯಿತು.
ಅತಿಥಿಗಳು ಶಾರದ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಗೈದರು. ಶ್ರೀಮತಿ ಅಕ್ಷತಾ ಅಡೂರು ಇವರು ಶಾರದೆಯನ್ನು ಸ್ತುತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ರಚನೆಯ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಸುಶ್ರಾವ್ಯವಾಗಿ ಹಾಡಿದರು. ಡಾ. ಶ್ರೀಧರ ಭಟ್ ಸ್ವಾಗತಿಸಿದರು.

ಉದಯ ಸುಬ್ರಹ್ಮಣ್ಯ ಇವರು ಗೀತೆಯ 6 ನೇ ಅಧ್ಯಾಯ ಧ್ಯಾನ ಯೋಗ ಅಥವಾ ಆತ್ಮ ಸಂಯಮನ ಯೋಗವನ್ನು ವಿವರಿಸುತ್ತಾ ತ್ಯಾಗ ಎಂದರೆ ಕ್ರಿಯೆಯನ್ನು ತ್ಯಜಿಸುವುದಲ್ಲ, ವಿವೇಕ ಪೂರ್ವಕ ಜ್ಞಾನ. ಭೌತಿಕ ಅಥವಾ ಆಧ್ಯಾತ್ಮಿಕ ಪ್ರಗತಿಗೆ ಜೀವನದ ಚಟುವಟಿಕೆಗಳ ಮಿತಗೊಳಿಸುವಿಕೆ ಮತ್ತು ನಿಯಂತ್ರಣ ಅತ್ಯಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಂಕರ್ ರಾವ್ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ಆಯೋಜಿಸಿದ ಈ ಕಾರ್ಯಕ್ರಮವನ್ನು ಶ್ಲಾಘಿಸಿ, ಗೀತೆಯು ಮಾನವರಾದ ನಮ್ಮ ಬದುಕನ್ನು ಸರಿಯಾದ ರೀತಿಯಲ್ಲಿ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ಕೈಪಿಡಿ ಇದ್ದಂತೆ. ಇದನ್ನು ಕೇಳುವುದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದರು. ಇವರಿಗೆ ಶ್ರೀಮತಿ ಪೂರ್ಣಿಮಾ ತಾಮನ್ಕರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಉದಯ ಸುಬ್ರಹ್ಮಣ್ಯ ಇವರಿಗೆ ಶ್ರೀ ಜನಾರ್ದನ ಪುಸ್ತಕ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಶ್ರೀಮತಿ ವನಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ರಾಮಕೃಷ್ಣ ಭಟ್ ಬದನಾಜೆ ಧನ್ಯವಾದವನ್ನಿತ್ತರು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರು ಮತ್ತು ಸದಸ್ಯರು, ಜಿಲ್ಲಾ ಸಮಿತಿಯ ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಸದಸ್ಯರು, ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಆರನೆಯ ಅಧ್ಯಾಯದ ಪ್ರಯೋಜನವನ್ನು ಪಡೆದುಕೊಂಡರು.