ಉಜಿರೆಯ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಜೂ.2ರಂದು ಜರಗಿತು.
ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾನೂ ಈ ಶಾಲೆಯ ಹಳೆ ವಿದ್ಯಾರ್ಥಿ ಎಂದ ಅವರು, ತನ್ನ ವಿದ್ಯಾರ್ಥಿ ಜೀವನದ ನೆನೆಪುಗಳನ್ನು ಮೆಲುಕು ಹಾಕಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಹಂಚಿಕೊಂಡರು.
ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶಿಕ್ಷಣ ಸಂಯೋಜಕ ಶಶಿಶೇಖರ್ ಎನ್. ಕಾಕತ್ಕರ್, “ನಿಮ್ಮ ಹೆತ್ತವರ ಪರಿಶ್ರಮದ ಬಗ್ಗೆ ಆಲೋಚಿಸಿ, ಅವರ ಕಷ್ಟದ ಜೀವನ ನಿಮ್ಮ ಮೇಲೆ ಪರಿಣಾಮ ಬೀರಬಾರದು ಎಂದು ಹೆತ್ತವರು ಅಭಿಪ್ರಾಯಪಡುತ್ತಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅತಿಥಿ, ಉಜಿರೆ ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಮಾತನಾಡಿದರು. ವಿದ್ಯಾರ್ಥಿಗಳ ಗುರಿ ನಿಖರವಿರಬೇಕು, ಪೋಷಕರು ತಮ್ಮ ಮಕ್ಕಳ ಬಗ್ಗೆ ಕೀಳರಿಮೆ ಹೊಂದದೆ ಅವರನ್ನು ಹುರಿದುಂಬಿಸಬೇಕು ಎಂದರು.
ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್, ‘ರತ್ನಮಾನಸ’ ವಿದ್ಯಾರ್ಥಿನಿಲಯದ ಪಾಲಕ ಯತೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಕೆ. ಸುರೇಶ್ ಸ್ವಾಗತಿಸಿದರು. ರವೀಶ್ ಕುಮಾರ್ ವಂದಿಸಿದರು. ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಹೊಸದಾಗಿ ಸೇರ್ಪಡೆಯಾಗಿರುವ 8ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರು ಆರತಿ ಬೆಳಗಿ, ಹಣೆಗೆ ಕುಂಕುಮವಿಟ್ಟು ಹೂ ಕೊಟ್ಟು ಸ್ವಾಗತಿಸಿದರೆ, ಹತ್ತನೇ ತರಗತಿ ವಿದ್ಯಾರ್ಥಿಗಳು ಆಯಾ ತರಗತಿಗೆ ಕರೆದುಕೊಂಡು ಹೋದರು.