ಬೆಳ್ತಂಗಡಿ: ಪಿಲಾತಬೆಟ್ಟು ಗ್ರಾಮದ ನೈನಾಡು ಅಂಗನವಾಡಿಗೆ ಹಿಂಭಾಗದ ಸಂತ ಜೋಸೆಫರ ಅನುದಾನಿತ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಅಂಗನವಾಡಿಯ ಒಂದು ಪಾರ್ಶ್ವದ ಗೋಡೆಗೆ ಭಾಗಶಃ ಹಾನಿಯಾಗಿದೆ.
ಅಂಗನವಾಡಿಯ ಗೋಡೆಯಲ್ಲಿ ಬಿರುಕು ಉಂಟಾಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಅಂಗನವಾಡಿಯನ್ನು ಸದ್ಯದ ಮಟ್ಟಿಗೆ ಹತ್ತಿರದ ಶ್ರೀರಾಮ ಭಜನಾ ಮಂದಿರದ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ.

ಅಂಗನವಾಡಿಯ ದಾಖಲೆ ಪುಸ್ತಕಗಳನ್ನು, ಕಪಾಟು, ಅಡುಗೆ ಸರಂಜಾಮುಗಳನ್ನು ಶ್ರೀರಾಮ ಯುವಕ ಸಂಘ ಹಾಗೂ ಭಜನಾ ಮಂದಿರದ ಸದಸ್ಯರ ಸಹಕಾರದಿಂದ ಭಜನಾ ಮಂದಿರದ ಸಭಾ ಭವನಕ್ಕೆ ಸಾಗಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ರತ್ನಾಕರ್, ಸದಸ್ಯ ಲಕ್ಷ್ಮೀನಾರಾಯಣ ಹೆಗ್ಡೆ ನಿನ್ಯಾಲು ಹಾಗೂ ಅಂಗನವಾಡಿ ಶಿಕ್ಷಕಿಯವರ ಕೋರಿಕೆಗೆ ಶ್ರೀ ರಾಮ ಭಜನಾ ಮಂದಿರದವರು ತಕ್ಷಣ ಸ್ಪಂದನೆ ನೀಡಿದ್ದಾರೆ.

ನೈನಾಡು ಪರಿಸರದಲ್ಲಿ ಬಹಳಷ್ಟು ವರ್ಷಗಳಿಂದ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದ್ದು ಸದರಿ ಅಂಗನವಾಡಿಗೆ ನೂತನ ಕಟ್ಟಡವು ಮಂಜೂರಾಗಿದ್ದು ಹತ್ತಿರದ ಶ್ರೀರಾಮ ಯುವಕ ಸಂಘಕ್ಕೆಂದು ಕಾದಿರಿಸಲಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.
ನೂತನ ಕಟ್ಟಡವು ಭಾಗಶಃ ಪೂರ್ಣಗೊಂಡಿದ್ದು, ನೆಲಹಾಸು, ಕಿಟಕಿ ಬಾಗಿಲು, ವಿದ್ಯುತ್ ಸಂಪರ್ಕಗಳು ಇನ್ನಷ್ಟೇ ಆಗಬೇಕಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಿ ನೂತನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ತ್ವರಿತವಾಗಿ ಸಾಗುವಂತೆ ಮಾಡಬೇಕೆಂದು ಊರವರ ಒಕ್ಕೊರಲಿನ ಮನವಿ. ಈ ಬಗ್ಗೆ ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವ ಗುತ್ತಿಗೆದಾರರಲ್ಲಿ ಮಾತುಕತೆ ನಡೆದಿದ್ದು ಅನುದಾನದ ಕೊರತೆಯಿದೆ ಎಂಬುದಾಗಿ ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ತುರ್ತಾಗಿ ನೂತನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕಾಗಿದೆ.