ಬೆಳ್ತಂಗಡಿ: ವ್ಯಾಪಕ ಮಳೆಯಿಂದ ಶಾಲಾರಂಭ ಎರಡು ದಿನ ತಡವಾಗಿ ತಾಲೂಕಿನ ಎಲ್ಲಾ 280 ಶಾಲೆಗಳು ಆರಂಭಗೊಂಡಿತು. 207 ಸರಕಾರಿ, 26 ಅನುದಾನಿತ, 40 ಅನುದಾನಿತ ರಹಿತ, 3 ವಸತಿ ಹಾಗೂ 4 ವಾಲ್ಮೀಕಿ ಶಾಲೆಗಳು ಸೋಮವಾರ ಪುನರಾರಂಭವಾಗಿದ್ದು, ಒಂದೂವರೆ ತಿಂಗಳ ಬೇಸಿಗೆ ರಜೆಯ ನಂತರ ಶಾಲೆಗೆ ಮರಳಿದು ಮಕ್ಕಳಲ್ಲಿ ಸಹಪಾಠಿಗಳನ್ನು ಮತ್ತೆ ಭೇಟಿ ಮಾಡಿದ ಸಂಭ್ರಮ ಮೇರೆಮೀರಿದ್ದು ವಿದ್ಯಾದೇಗುಲಗಳಲ್ಲಿ ಮಕ್ಕಳ ಕಲರವ ಮತ್ತೆ ಚಿಗುರೊಡೆದಿದೆ. ವಿದ್ಯಾರ್ಥಿಗಳು ಹೊಸದೊಂದು ಚೇತನದೊಂದಿಗೆ ಪುಟ್ಟ ನಗುವಿನೊಂದಿಗೆ ಜ್ಞಾನವನ್ನು ಅರಿಯಲು ಯಾತ್ರಿಕನಂತೆ ಭವಿಷ್ಯ ನಿರ್ಮಿಸುವ ವಿದ್ಯಾದೇಗುಲಕ್ಕೆ ಮಕ್ಕಳು ಕೈ ಮುಗಿದು ಪ್ರವೇಶಿಸಿದರು. ಮೇ 30ಕ್ಕೆ ಆರಂಭವಾಗಬೇಕಿದ್ದ ಶಾಲೆಗಳು ಮಳೆಯಿಂದಾಗಿ ಎರಡು ದಿನ ಬಳಿಕ ಪ್ರಾರಂಭವಾಗಿದೆ. “ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ” ಎನ್ನುವ ಘೋಷದೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಪಾದಾರ್ಪಣೆ ಮಾಡಿದರು.

ಆತ್ಮೀಯ ಸ್ವಾಗತ:
ಮಕ್ಕಳ ಸ್ವಾಗತಕ್ಕಾಗಿ ಬಾಳೆಕಂದು, ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗಾರಗೊಳಿಸಲಾಗಿತ್ತು. ಶಾಲೆಗಳಲ್ಲಿ ಹಬ್ಬದ ವಾತಾರಣವಿತ್ತು. ಕಳೆದ ಎರಡು ಮೂರು ದಿನಗಳಿಂದ ಶಾಲೆಗೆ ಬರುತ್ತಿರುವ ಶಿಕ್ಷಕ ವೃಂದ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಮಕ್ಕಳಿಗೆ ಹಾಲು, ಗುಲಾಬಿ ಹೂ ಹಾಗೂ ಸಿಹಿ ತಿನಿಸಿ ಶಾಲೆಗಳಿಗೆ ಬರಮಾಡಿಕೊಂಡರು. ಮೊದಲ ದಿನವೇ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಕೆಲ ಶಾಲೆಗಳಲ್ಲಿ ಮಕ್ಕಳ ಜತೆ ಪೋಷಕರೂ ಆಗಮಿಸಿದ್ದರು. ಮಧ್ಯಾಹ್ನದ ಬಿಸಿಯೂಟದಲ್ಲೂ ಸಿಹಿಯ ಸವಿ ದೊರಕಿತು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಜೂನ್ 30ರವರೆಗೆ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗಳಿಗೆ ಕರೆತರಲು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ತಾಲೂಕು ಮಟ್ಟದಲ್ಲಿ ಶಾಲಾ ಆರಂಭೋತ್ಸವ ಕಾರ್ಯಕ್ರಮ:
ಬೆಳ್ತಂಗಡಿ ಪಿಎಂಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಆರಂಭೋತ್ಸವ ಕಾರ್ಯಕ್ರಮ ಜೂ.2ರಂದು ನಡೆಯಿತು. ಶಾಸಕ ಹರೀಶ್ ಪೂಂಜ, ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅಡಿಪಾಯ ಪ್ರಮುಖ್ಯವಾದುದು ಎಂದರು.

ವೇದಿಕೆಯಲ್ಲಿ, ತಾ.ಪಂ. ಇಓ ಭವಾನಿಶಂಕರ್ ಎನ್ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರಕೃಷ್ಣ ಹಾಗೂ ಕೇತ್ರ ಸಮನ್ವಯ ಅಧಿಕಾರಿ ಬಸವಲಿಂಗಪ್ಪ ಉಪಸ್ಥಿತರಿದ್ದರು.
ಸರಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಮನಶ್ರೀ ಹಾಗೂ ಸುಪ್ರಿತಾ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಶಾಲಾ ಪ್ರಾರಂಭೋತ್ಸವದ ನೃತ್ಯ ಪ್ರದರ್ಶಿಸಿದರು.
ಬಿಒ ವೆಂಕಟೇಶ್ ತುಳುಪುಳೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯ ವಂದಿಸಿ, ಸಹಶಿಕ್ಷಕಿ ರೇಣುಕಾ ನಿರೂಪಿಸಿದರು.