ಉಜಿರೆ ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಪ್ಲಾಸ್ಟಿಕ್ ಮಾಲಿನ್ಯ ಕಡಿಮೆಗೊಳಿಸಿ’ ಘೋಷವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ಜೂ.5ರಂದು ನಡೆಯಿತು.

ಶಾಲಾಪೋಷಕ, ಪ್ರಗತಿಪರ ಕೃಷಿಕ ಅನಿಲ್ ಬಳಂಜ ಅವರು ಗಿಡ ನೆಡುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಾಣಿಗಳಿಗೆ ಆಹಾರದ ಕೊರತೆಯಾದರೆ ಪ್ರಾಣಿಸಂಕುಲ ಅಳಿವಿನಂಚಿಗೆ ಸಾಗುತ್ತದೆ. ಭೂಮಿಗೆ ನಮ್ಮ ಅಗತ್ಯವಿಲ್ಲ ಆದರೆ ನಮಗೆ ಭೂಮಿಯ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ಲಾಸ್ಟಿಕ್ ರಹಿತ ಪರಿಸರ, ಸುಂದರ ಪರಿಸರ ನಮ್ಮಿಂದಲೇ ನಿರ್ಮಾಣವಾಗಲಿ’ ಎಂದರು.
ಪರಿಸರ ಸೌಂದರ್ಯ ಉಳಿಸಲು ಹಾಗೂ ಜೀವಿಗಳ ಉಳಿಯುವಿಕೆಗೆ ಹಣ್ಣಿನ ಗಿಡಗಳನ್ನು ಬೆಳೆಯುವುದು ಮಹತ್ವದ ಕಾರ್ಯ ಎಂದು ಅವರು ತಿಳಿಸಿದರಲ್ಲದೆ, ವಿದ್ಯಾರ್ಥಿಗಳಿಗೆ ಕಸಿಕಟ್ಟುವ ವಿಧಾನವನ್ನು ತಿಳಿಸಿಕೊಟ್ಟರು.

ವಿಶ್ವ ಪರಿಸರ ದಿನದ ಪ್ರಯುಕ್ತ ಪ್ರತಿಜ್ಞಾ ಸ್ವೀಕಾರ, ಪರಿಸರ ಹಾಡು, ನಾಟಕ, ನೃತ್ಯ, ಪ್ಲಾಸ್ಟಿಕ್ ಬದಲಿ ವಸ್ತುಗಳ ತಯಾರಿ-ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮೀ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೌಫೀರ ಅತಿಥಿ ಪರಿಚಯ ನೀಡಿದರು. ಸೃಜನಾ ಸ್ವಾಗತಿಸಿ, ಮನಸ್ವಿ ವಂದಿಸಿದರು. ಜ್ಞಾನ್ ಅನ್ವೇಷ್, ಸಚಿತ್ ಭಟ್ ಕಾರ್ಯಕ್ರಮ ನಿರೂಪಿಸಿದರು.














