ಬೆಳ್ತಂಗಡಿ: ಚಿತ್ರದುರ್ಗದಿಂದ ಬಂದು ಬೆಳ್ತಂಗಡಿ ಮೂಲಕ ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ ತೆರಳಿದ್ದ 10 ತಂಡ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿದ ಘಟನೆ ಜೂ. 9 ರಂದು ತಡರಾತ್ರಿಯಲ್ಲಿ ನಡೆದಿದೆ.
ಜೂ. 9 ರಂದು ಬೆಳಗ್ಗೆ, ಬೆಳ್ತಂಗಡಿಗೆ ಬಂದು ಅರಣ್ಯದ ಮೂಲಕ ಟ್ರೆಕ್ಕಿಂಗ್ ಆರಂಭಿಸಿದ ಐವರು ಯುವಕರು ಹಾಗೂ ಐದು ಮಂದಿ ಯುವತಿಯರ ತಂಡ ಚಾರಣಿಗರು ರಾತ್ರಿಯ ವೇಳೆ ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದು, ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ನಂತರ ಕಾರ್ಯ ಪ್ರವೃತ್ತರಾದ ಚಿಕ್ಕಮಗಳೂರು ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಜೊತೆ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು ತಡ ರಾತ್ರಿಯ ವೇಳೆ ಇವರನ್ನು ದಟ್ಟ ಅರಣ್ಯದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಬೆಳಗಿನ ಜಾವ ಇವರನ್ನು ಅರಣ್ಯದಿಂದ ಸುರಕ್ಷಿತವಾಗಿ ಹೊರತರಲಾಗಿದೆ.