
ಉಜಿರೆ :ಪ್ರತಿ ವರ್ಷ ಜೂ. 21 ರಂದು ಆಚರಿಸುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡದ ಪದವಿ ವಿದ್ಯಾರ್ಥಿ ಗಳಿಗೆ ಉಜಿರೆಯ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕಾಲೇಜಿನ ವತಿಯಿಂದ ಕಾರ್ಯಾಗಾರ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಮಾತನಾಡಿ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಕಳೆದ 36 ವರ್ಷಗಳ ಹಿಂದೆ ಆರಂಭವಾಗಿ ಸತತವಾಗಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ, ಅದೇ ರೀತಿಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ. ಇಂದು ಭಾರತದಲ್ಲಿ ಅಲ್ಲದೆ ಪಾಶ್ಚಾತ್ಯ ದೇಶಗಳಲ್ಲಿ ಕೂಡ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಉತ್ತಮ ಮನ್ನಣೆ ಸಿಗುವಂತಹ ಕೆಲಸ ಈ ಕಾಲೇಜಿನಿಂದ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕರ್ನಾಟಕ ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ. ಛಲವಾದಿ ಅತಿಥಿಯಾಗಿ ಆಗಮಿಸಿದ್ದರು.
ಪ್ರಾಂಶುಪಾಲರಾದ ಡಾ.ಪ್ರಶಾಂತ್ ಶೆಟ್ಟಿ ಮಾತನಾಡಿ ಯೋಗವನ್ನು ನಮ್ಮ ನಿತ್ಯಜೀವನದಲ್ಲಿ ಯಾಕೆ ಅಳವಡಿಸಿ ಕೊಳ್ಳಬೇಕು ಮತ್ತು ಅದರ ಉಪಯೋಗವನ್ನು ವಿಸ್ತಾರವಾಗಿ ತಿಳಿಸಿದರು.
ಕಾಲೇಜಿನ ಯೋಗ ವಿಭಾಗದ ಮುಖ್ಯಸ್ಥ ಹಾಗೂ ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ
ಡಾ.ಶಿವಪ್ರಸಾದ್ ಶೆಟ್ಟಿ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗವು ಯಾವ ರೀತಿಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ ಹಾಗೂ ಪಾಶ್ಚಾತ್ಯ ದೇಶಗಳು ಯಾವ ಉದ್ದೇಶದೊಂದಿಗೆ ಒಲವು ತೋರಿಸುತ್ತಿವೆ ಎಂದು ವಿವರಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಡಾ. ಸುಜಾತಾ ಕೆ.ಜೆ. ಹಾಗೂ ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ. ಗೀತಾ ಬಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಸುಜಾತಾ ಕೆ.ಜೆ. ವಂದಿಸಿದರು.