ನಾರಾವಿ: ದೇವಾಲಯ ಮತ್ತು ಶಾಲೆ ಊರಿನ ಎರಡು ಕಲಶವಿದ್ದಂತೆ. ಶಾಲೆಗಳು ನಶಿಸಿಹೋದರೆ ಮುಂದಿನ ಪೀಳಿಗೆಗೆ ಸಮಸ್ಯೆಯಾಗಬಹುದು. ಈ ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶತಮಾನೋತ್ಸವದ ಇತಿಹಾಸವುಳ್ಳ ಈ ಶಾಲೆಯ ವಿದ್ಯಾರ್ಥಿಗಳಿಗೆ ನಾರಾವಿ ಸಹಕಾರಿ ಸಂಘವು ಉಚಿತ ಪುಸ್ತಕ ವಿತರಿಸುವ ಮೂಲಕ ಶೈಕ್ಷಣಿಕವಾಗಿ ಶಕ್ತಿ ತುಂಬಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಜೂ10 ರಂದು ನಾರಾವಿ ಹಿ.ಪ್ರಾ.ಶಾಲೆಯಲ್ಲಿ ನಾರಾವಿ ಸಹಕಾರಿ ಸಂಘದ ವತಿಯಿಂದ ನಡೆದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈ ಸಲದ ಎಸ್.ಎಸ್.ಎಲ್.ಸಿ ಯಲ್ಲಿ ನಮ್ಮ ತಾಲೂಕು ಉತ್ತಮ ಫಲಿತಾಂಶ ಪಡೆದಿದೆ.ನಾರಾವಿ ಸಿಎ ಬ್ಯಾಂಕಿನಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆಯಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ವಹಿಸಿ ಮಾತನಾಡಿ ಸಹಕಾರಿ ಸಂಘವು ರೈತರಿಗೆ ಸಹಕಾರ ನೀಡಿದಂತೆ ಊರಿನ ಶಾಲೆಗಳ ಅಭಿವೃದ್ಧಿಯಲ್ಲಿಯೂ ಕೈ ಜೋಡಿಸಿದೆ.ನಮ್ಮೂರಿನ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಸಂಘದಿಂದ ಪುಸ್ತಕ ನೀಡಿ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್,ನಾರಾವಿ ಗ್ರಾಪಂ ಅಧ್ಯಕ್ಷ ರಾಜವರ್ಮ ಜೈನ್,ಉಪಾಧ್ಯಕ್ಷೆ ಸುಮಿತ್ರಾ ಜೈನ್,ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಹೆಗ್ಡೆ,ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಕಾರ್ಯದರ್ಶಿ ಜಯಂತ್ ಕೋಟ್ಯಾನ್,ನಾರಾವಿ ಗ್ರಾ.ಪಂ ಸದಸ್ಯರಾದ ಉದಯ ಹೆಗ್ಡೆ,ವಸಂತ,ನಾರಾವಿ ಪ್ರೌಡ ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸದಾನಂದ ಗೌಡ,ರಾಜೇಂದ್ರ ಕುಮಾರ್,ಸುಜಲತಾ,ಸುಪ್ರೀಯಾ,ಪದ್ಮಶ್ರೀ,ಕೃಷ್ಣಪ್ಪ ಪೂಜಾರಿ,ಯಶೋಧ ಕುತ್ಲೂರು,ವಿಠಲ ಪೂಜಾರಿ,ಉಮೇಶ್ ಗೌಡ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಸಹಕರಿಸಿದರು.
ನಾರಾವಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್ ಸ್ವಾಗತಿಸಿದರು, ನಾರಾವಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್ ನಾರಾವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಯಶೋಧರ ಮರೋಡಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ:ಕಾರ್ಯಕ್ರಮದಲ್ಲಿ ಶಾಲೆಗೆ ವಿಶೇಷ ರೀತಿಯಲ್ಲಿ ಸಹಕಾರ ನೀಡಿದ ಶಾಸಕ ಹರೀಶ್ ಪೂಂಜ, ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್,ವಸಂತ ಆಚಾರ್ಯ ನಾರಾವಿ,ಶ್ರೀ.ಧ.ಗ್ರಾ.ಯೋ ಮೇಲ್ವಿಚಾರಕರನ್ನು ಗೌರವಿಸಲಾಯಿತು.
ನಮ್ಮ ಸಹಕಾರಿ ಸಂಘದ ಲಾಭಾಂಶದಲ್ಲಿ ಈ ವ್ಯಾಪ್ತಿಯ ಸರಾಸರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಕೆಲವು ಶಾಲೆಗಳಿಗೆ ಇತರ ಸವಲತ್ತುಗಳನ್ನು ಹಸ್ತಾಂತರ ಮಾಡಿದ್ದೇವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಕೂಡ ನಗರ ಪ್ರದೇಶದಂತೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಶಿಕ್ಷಣಕ್ಕೆ ನಮ್ಮ ಸಹಕಾರಿ ಸಂಘವು ಸಹಕಾರ ನೀಡುತ್ತಿದೆ ಎಂದು ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧಾಕರ ಭಂಡಾರಿ ಹೇಳಿದರು.