ಬೆಳ್ತಂಗಡಿ: ನಾವು ನಮ್ಮ ಮನೆಗಳಲ್ಲಿ ದಿನನಿತ್ಯ ಪೂಜೆ ಮಾಡಿದರೆ ಸಾಲದು, ಭಗವಂತನನ್ನು ನಮ್ಮ ಹೃದಯಲ್ಲಿ ಪ್ರತಿಷ್ಠಾಪಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಆದಿ ಶಂಕರಾಚಾರ್ಯರು ಸೌಂದರ್ಯ ಲಹರಿ ಸ್ತೋತ್ರವನ್ನು ರಚಿಸಿದ್ದಾರೆ. ಅದು ಜನಮಾನಸವನ್ನು ತಲುಪಬೇಕೆಂಬ ಉದ್ದೇಶದಿಂದ ಮಠವು ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ನಾಲ್ಕೂರು ಗ್ರಾಮದ ಸೂಳಬೆಟ್ಟು ಮುರಳೀಧರ ಗೋಖಲೆ ಅವರ ಮನೆಗೆ ಆಗಮಿಸಿ, ಮಹೇಶ್ ಗೋಖಲೆ ನೇತೃತ್ವದಲ್ಲಿ ನಡೆಯುವ ಸ್ತೋತ್ರ ಪಾಠಶಾಲೆಗೆ ಚಾಲನೆ ನೀಡಿ ಆಶೀರ್ವದಿಸಿದರು.
ನಮಗಾಗಿ ನಾವು ದೇವರ ಪೂಜೆ ಮಾಡುತ್ತೇವೆ. ಬಳಿಕ ಕ್ಷಣಕ್ಷಣಕ್ಕೂ ಪಾಪಕಾರ್ಯಗಳಲ್ಲಿ ಭಾಗಿಯಾಗುತ್ತೇವೆ. ಹೀಗೆ ಆಗಲೇ ಬಾರದು ಎಂಬುದು ಶಂಕರಾಚಾರ್ಯರ ಇಂಗಿತವಾಗಿತ್ತು. ಅದಕ್ಕಾಗಿ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರೀ ಸ್ತೋತ್ರ ಮಹಾಭಿಯಾನ, ವಿದ್ಯಾರ್ಥಿಗಳಿಗಾಗಿ ವಿವೇಕದೀಪಿನೀ ಮಹಾಭಿಯಾನ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ದೇಶದ ಮೂಲೆ ಮೂಲೆಗಳಿಗೂ ಸಂಚರಿಸಿ, ಅಧ್ಯಾತ್ಮಿಕ ಶಿಬಿರಗಳನ್ನು ಆಯೋಜಿಸಿ, ಶಂಕರರ ಉಪಪದೇಶಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದ ಅವರು ಸೇರಿದ್ದ ಶ್ರದ್ಧಾಳುಗಳಿಗೆ ಪ್ರಥಮ ಪಾಠವನ್ನು ಹೇಳಿಸುವ ಮೂಲಕ ಪಾಠಶಾಲೆಗೆ ಆಶೀರ್ವದಿಸಿದರು.
ಗ್ರಾಮದ ಜನರಿಗೆ ಫಲಮಂತ್ರಾಕ್ಷತೆಗಳನ್ನು ನೀಡಿ ಶ್ರೀಗಳು ಆಶೀರ್ವದಿಸಿದರು. ಪುರೋಹಿತರಾದ ಪದ್ಮನಾಭ ಜೋಶಿ, ಸತೀಶ್ ಹೆಬ್ಬಾರ್, ವೆಂಕಟೇಶ ಗೋಖಲೆ, ತಾಲೂಕು ಚಿತ್ಪಾವನ ಸಂಘದ ಅಧ್ಯಕ್ಷ ತ್ರಿವಿಕ್ರಮ ಕೇಳ್ಕರ್, ನಿರಂಜನ ಜೋಶಿ, ಪ್ರವೀಣ ಚಂದ್ರ ಮೆಹೆಂದಳೆ, ಡಾ| ಸುಷ್ಮಾ ಡೋಂಗ್ರೆ, ಪ್ರಭಾಕರ ಆಠವಳೆ, ಪ್ರಶಾಂತ ನಾತು, ಪ್ರಸನ್ನ ಹೆಬ್ಬಾರ್, ಪುರುಷೋತ್ತಮ ತಾಮ್ಹನ್ ಕಾರ್, ಅನಂತ ಮರಾಠೆ, ಮುಕುಂದ ಗೋಖಲೆ, ಸುಧೀರ ಗೋಖಲೆ, ಚಂದ್ರಹಾಸ ಹೆಬ್ಬಾರ್, ದಿನೇಶ್ ಅಭ್ಯಂಕರ್, ರತ್ನಾಕರ ಹೆಬ್ಬಾರ್, ರಾಜೇಂದ್ರ ಗೋಖಲೆ, ಸುಧೀರ್ ಬಾಪಟ್, ಮಹಿಳೆಯರು, ಮಕ್ಕಳು ಇದ್ದರು.