ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜರವರ ಚಾತುರ್ಮಾಸ್ಯ ವ್ರತಾಚರಣೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜು.10 ರಿಂದ ಆ.20ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ನಡೆಯಲಿದೆ.
ಜು.10 ಗುರುವಾರ ಗುರುಪೂರ್ಣಿಮೆ ಯಂದು ವನದುರ್ಗಾ ದೇವಾಲಯದಲ್ಲಿ ಬೆಳಿಗ್ಗೆ 7.೦೦ ಗಂಟೆಯಿಂದ 9.೦೦ ಗಂಟೆಯವರೆಗೆ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿ-ವಿಧಾನಗಳು ನೆರವೇರಲಿದೆ. ಕುಮುಟಾ ನಾಮಧಾರಿ ಸಭಾಭವನದ ಆವರಣದಲ್ಲಿರುವ ಶ್ರೀ ವೆಂಕಟ್ರಮಣ ದೇವರಿಗೆ ಪೂಜೆ ಸಲ್ಲಿಸಿ, ದೇವಸ್ಥಾನದಿಂದ ಶ್ರೀಗಳ ಪುರಪ್ರವೇಶದ ಭವ್ಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ.
ದಿನಂಪ್ರತಿ ಹೆಸರಾಂತ ಕಲಾ ತಂಡಗಳಿಂದ ಭರತನಾಟ್ಯ ವೈಭವ, ಗೀತಾರೂಪಕ, ತಾಳೆಗರಿ ರಾಮಾಯಣ ಪಠಣ, ಕುಂಚ ಗೀತಾ ರಾಮ ಕಥಾ, ಸುಗಮ ಸಂಗೀತ, ಭಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಗುರುಪೂಜೆ, ಅನ್ನಸಂತರ್ಪಣೆ ಜರುಗಲಿದೆ.











