ಉಜಿರೆ: ಶಾಲಾ ಅಥವಾ ಕಾಲೇಜು ಹಂತದಲ್ಲಿ ಸ್ಕೌಟ್ ಗೈಡ್ ಶಿಕ್ಷಣವು ಕೇವಲ ತೋರಿಕೆಗೆ ಸೀಮಿತವಾಗಿರದೇ ನಮ್ಮ ವ್ಯಕ್ತಿತ್ವದ ವಿಕಸನಕ್ಕೆ ದಾರಿ ದೀಪವಾಗಿದೆ ಎಂದು ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ಮುಖ್ಯಸ್ಥ ಮತ್ತು ಈ ಹಿಂದೆ ಕಾಲೇಜಿನಲ್ಲಿ ರೋವರ್ ಸ್ಕೌಟ್ ಲೀಡರ್ ಆಗಿ ಕರ್ತವ್ಯ ನಿರ್ವಹಿಸಿದ್ದ ತಿರುಮಲ ಪ್ರಸಾದ ಸಿ ಹೆಚ್. ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಸ್ಕೌಟ್-ಗೈಡ್ ದಳದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಸ್ಕಾರ್ಫ್ ದಿನಾಚರಣೆಯಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ರಾಜೇಶ ಬಿ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸ್ಕಾರ್ಫ್ ನ ಮಹತ್ವ ಮತ್ತು ಅದನ್ನು ಧರಿಸಿದಾಗ ಸ್ಕೌಟ್-ಗೈಡ್ ವಿದ್ಯಾರ್ಥಿಗಳಲ್ಲಿ ಸದಾ ಶಿಸ್ತು, ಸಮಯ ಪ್ರಜ್ಞೆ, ವಿಶ್ವ ಭ್ರಾತೃತ್ವದಂತಹ ಉದಾತ್ತ ಗುಣಗಳು ನಮ್ಮಲ್ಲಿ ಬೆಳೆಯುವಂತೆ ಪ್ರೇರೇಪಣೆ ಮಾಡುವಂತಾಗಲಿ.ಉತ್ತಮ ಪೌರತ್ವ ಮತ್ತು ಮಾನವೀಯ ಮೌಲ್ಯಗಳ ಬೆಳೆವಣಿಗೆಗೆ ಸ್ಕೌಟ್ ಗೈಡ್ ಶಿಕ್ಷಣವು ಉಪಕಾರಿಯಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ದಳಕ್ಕೆ ನೂತನವಾಗಿ ಸೇರಿರುವ ಪ್ರಥಮ ಪಿ ಯು ಸಿ ಯ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸ್ಕಾರ್ಫ್ ತೊಡಿಸಿ ವಿಶ್ವ ಸ್ಕೌಟ್ ಕುಟುಂಬದೊಂದಿಗಿನ ಅವರ ಹೊಸ ಪ್ರಯಾಣಕ್ಕೆ ಚಾಲನೆ ನೀಡಲಾಯಿತು.ಎಲ್ಲಾ ವಿದ್ಯಾರ್ಥಿಗಳು ಪರಸ್ಪರ ಸ್ಕಾರ್ಫ್ ಧರಿಸಿ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳನಾಯಕರುಗಳಾದ ಲಕ್ಷ್ಮೀಶ್ ಭಟ್ ಮತ್ತು ಅಂಕಿತಾ ಎಂ.ಕೆ. ವಿಶ್ವ ಸ್ಕಾರ್ಫ್ ದಿನಾಚರಣೆಯನ್ನು ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಂದಲೇ ಆಯೋಜಿಸುವಲ್ಲಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿ ವಿನೂತನವಾಗಿ ಆಚರಿಸುವಲ್ಲಿ ಅಗತ್ಯ ಸಹಕಾರ ನೀಡಿದರು.
ರೋವರ್ ವಿದ್ಯಾರ್ಥಿಗಳಾದ ಸಮೃದ್ಧ್ ಜೈನ್ ಸ್ವಾಗತಿಸಿ, ವಿಶಾನ್ ವಂದಿಸಿ, ಪವನ್ ಬಿ ಪಿ ಕಾರ್ಯಕ್ರಮ ನಿರ್ವಹಿಸಿದರು.











