ಮುಂಡಾಜೆ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಪಿತಾಮಹರೆಂದೇ ಖ್ಯಾತರಾದ ಮೊಳಹಳ್ಳಿ ಶಿವರಾಯರ145ನೇ ಜನ್ಮದಿನವನ್ನು ಶ್ರದ್ಧೆಯಿಂದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಆಚರಿಸಲಾಯಿತು.
ಪ್ರತಿಷ್ಠೆಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ್ನು ಒಳಗೊಂಡಂತೆ ಹಲವಾರು ಸಂಘ-ಸಂಸ್ಥೆಗಳ ಸ್ಥಾಪಕರಾಗಿದ್ದ ಮೊಳಹಳ್ಳಿ ಅವರು ಗ್ರಾಮೀಣ ಪ್ರದೇಶಗಳಿಗೆ ಬಂದು ಅಲ್ಲಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಕಾರಣೀಭೂತರಾಗಿದ್ದರು. ರೈತರ ದುರ್ಬಲ ವರ್ಗದವರ ಮಹಿಳೆಯರ ಕುರಿತು ಅಪಾರ ಕಾಳಜಿ ಹೊಂದಿದ್ದ ಶಿವರಾಯರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಕ್ರಮಿಸಬೇಕಾಗಿದೆ ಎಂದು ನಾರಾಯಣ ಫಡಕೆ ಮುಂಡಾಜೆ ತಿಳಿಸಿದರು.
ಮುಂಡಾಜೆ ಪ್ಯಾಕ್ಸ್ ನ ನಿರ್ದೇಶಕ ಕಜೆ ವೆಂಕಟೇಶ್ವರ ಭಟ್ ಮಾತನಾಡಿ, ಮೊಳಹಳ್ಳಿ ಶಿವರಾಯರ ದೂರ ದೃಷ್ಟಿಯಿಂದ ಇಂದು ಸಹಕಾರಿ ಕ್ಷೇತ್ರ ಚೆನ್ನಾಗಿ ಬೆಳೆದಿದ್ದು ನಾವೆಲ್ಲ ಸಹಕಾರಿ ಕ್ಷೇತ್ರದ ಮೂಲಕ ಬೆಳೆಯುತ್ತಿದ್ದೇವೆ ಎಂದರು.ರಬ್ಬರ್ ಸೊಸೈಟಿ ಉಜಿರೆಯ ಉಪಾಧ್ಯಕ್ಷ ಅನಂತ ಭಟ್ ಮಾತನಾಡಿ ಇಂದು ಹೆಚ್ಚಿನ ಸಂಘಗಳು ಸೇವೆಯ ಬದಲು ಲಾಭದ ದೃಷ್ಟಿಕೋನ ಇಟ್ಟುಕೊಂಡಿರುವುದು ಸರಿಯಲ್ಲ. ಸಂಘಗಳ ಮುಖ್ಯ ಉದ್ದೇಶ ಸೇವೆಯಾಗಿರಬೇಕು ಎಂದು ತನ್ನ ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರಕಾಶ್ ನಾರಾಯಣ, ಮೊಳಹಳ್ಳಿ ಅವರ ಕಲ್ಪನೆಯ ಸಹಕಾರಕ್ಕೆ ನಮ್ಮ ಸಂಘ ರೈತರ ಬಳಿ ಹೋಗಿ ಎಲ್ಲ ವ್ಯವಹಾರಗಳನ್ನು ನಡೆಸುವ ನಿಟ್ಟಿನಲ್ಲಿ ಶೀಘ್ರವೇ ಚಾರ್ಮಾಡಿಯಲ್ಲಿ ಪೂರ್ಣ ಪ್ರಮಾಣದ ಶಾಖೆಯನ್ನು ಆರಂಭಿಸಲಿದ್ದೇವೆ ಎಂದು ತಿಳಿಸಿದರು. ಸಂಘದ ಆಡಳಿತ ಮಂಡಳಿ ಸದಸ್ಯ ಚನ್ನಕೇಶವ ಹಾಗೂ ಸಂಘದ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ ವಂದಿಸಿದರು. ಶಾಖಾ ವ್ಯವಸ್ಥಾಪಕ ಡೇವಿಸ್ ಬಾಬು ಎಮ್ ಸುಷ್ಮಾ ಸ್ನೇಹಾ, ಅಶ್ವಿನ್ , ಪ್ರಸಾದ್ ಉಪಸ್ಥಿತರಿದ್ದರು.











