ಕಡಿರುದ್ಯಾವರ: ಶ್ರೀ ವನದುರ್ಗಾದೇವಿ ದೇವಸ್ಥಾನ ಟ್ರಸ್ಟ್ (ರಿ) ಇದರ ವತಿಯಿಂದ ‘ವಿಜಯರತ್ನ ಪ್ರಶಸ್ತಿ’ ಪುರಸ್ಕೃತ ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಇವರಿಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮವು ಆ.17 ರಂದು ಕಡಿರುದ್ಯಾವರದ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಜರುಗಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಮಂತ್ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ತಾನು ಬಡತನದೊಂದಿಗೆ ಬೆಳೆದು ಶಿಕ್ಷಣಕ್ಕಾಗಿ ಪಟ್ಟ ಕಷ್ಟ ಇಂದಿನ ಗ್ರಾಮೀಣ ಪ್ರದೇಶದ ಮಕ್ಕಳು ಅನುಭವಿಸಬಾರದು. ಅವರಿಗೆ ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಎಕ್ಸೆಲ್ ಎಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿದೆ ಎಂದು ಹೇಳಿದರು.
ಸನ್ಮಾನಿತರ ಶಿಕ್ಷಕಿಯಾಗಿರುವ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸರೋಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸುಮಂತ್ ಅವರ ಪ್ರಾಥಮಿಕ ಶಾಲಾ ಜೀವನದ ಬಗ್ಗೆ ನೆನಪಿಸಿಕೊಂಡರು. ಶ್ರೀ ವನದುರ್ಗಾದೇವಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್ ಅಭಿನಂದನಾ ಭಾಷಣ ಮಾಡಿ ಸುಮಂತ್ ಅವರ ಸಾಧನೆ ಬಗ್ಗೆ ಬೆಳಕು ಚೆಲ್ಲಿದರು.
ಸುಮಂತ್ ಅವರ ಮಾತಾ ಪಿತೃಗಳಾದ ಶ್ರೀಮತಿ ಶುಭಲತಾ ಮತ್ತು ಸತೀಶ್ ಆರಿಗ ಬೆಳ್ಳೂರುಗುತ್ತು, ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರತ್ನಾವತಿ ಬಾಲಕೃಷ್ಣ , ಸಮಿತಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.











