ಉಜಿರೆ: ಭಾರತದ ಅತ್ಯಂತ ಕಿರಿಯ ಪ್ರಧಾನಿ ಎನಿಸಿದ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ದಿ.ರಾಜೀವ್ ಗಾಂಧಿಯವರ ಜನ್ಮ ಜಯಂತಿಯ ಪ್ರಯುಕ್ತ ನಡೆಸಲ್ಪಡುವ ಸದ್ಭಾವನಾ ದಿನಾಚರಣೆಯನ್ನು ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವ ಧರ್ಮ ಪ್ರಾರ್ಥನೆಯನ್ನು ನೆರವೇರಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್. ಬಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರುವುದೇ ಭಾರತದ ಅಸ್ಮಿತೆ. ಸರ್ವ ಧರ್ಮಗಳಲ್ಲಿಯೂ ಸದ್ಭಾವನೆಯನ್ನು ಮೂಡಿಸುವುದರ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ತಡೆಯಬಹುದು. ಶಾಂತಿ ಸೌಹಾರ್ಧತೆಗಳು ಒಂದು ದೇಶದ ಅಭಿವೃದ್ಧಿಗೆ ರಹದಾರಿಯಾಗುತ್ತದೆಯೇ ಹೊರತು ದ್ವೇಷ ಸಂಘರ್ಷಗಳಿಂದ ಸಾಧ್ಯವಿಲ್ಲ ಎಂದರು.
ವಿದ್ಯಾರ್ಥಿಗಳಾದ ಧರೇಶ್ ಹಿಂದೂ ಧರ್ಮದ ,ಅಫೀಫಾ ಇಸ್ಲಾಂ ಧರ್ಮದ,ನಿಜಾ ಕ್ರೈಸ್ತ ಧರ್ಮದ, ಪವಿತ್ರಾ ಜೈನ್, ಜೈನ ಧರ್ಮದ ಮತ್ತು ಲಿಖಿತಾ ಬೌದ್ಧ ಧರ್ಮದ ಪ್ರಾರ್ಥನೆ ಹಾಗೂ ಸಂದೇಶವನ್ನು ಸಾರಿದರು. ಮಹಾತ್ಮಾ ಗಾಂಧಿಯವರ ಪ್ರಿಯ ಭಜನೆ ರಘುಪತಿ ರಾಘವ ರಾಜಾರಾಮ್ ಅನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿದರು.
ವಿದ್ಯಾರ್ಥಿ ಪ್ರಣವ್ ಕೃಷ್ಣ ಭಟ್ ಸ್ವಾಗತಿಸಿ, ನಿರ್ವಹಿಸಿದರು ಶ್ರೀಲಕ್ಷ್ಮಿ ವಂದಿಸಿದರು. ಕಾಲೇಜಿನ ಕಲಾ ವಿಭಾಗದ ಸಂಘ ವ್ಯುತ್ಪತ್ತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯಾ ಕುಮಾರಿ, ಶ್ಯಾಮಿಲ ಹಾಗೂ ಡಾ. ಸಾಜಿದ ಉಪಸ್ಥಿತರಿದ್ದು ಸಹಕರಿಸಿದರು.











