ಬೆಳ್ತಂಗಡಿ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕಂಪೆನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಪ್ರವೇಶ ಪರೀಕ್ಷೆ (CSEET) ಓರಿಯೆಂಟೇಷನ್ ಕಾರ್ಯಾಗಾರವು ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ CS ಸಂತೋಷ್ ಪ್ರಭು ಹಾಗೂ ICSI ಮಂಗಳೂರು ಚಾಪ್ಟರ್ನ ಆಡಳಿತಾಧಿಕಾರಿ ಶಂಕರ್ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ್ ಮರಿಕೆ, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ಹಾಗೂ ಮುಖ್ಯಸ್ಥರಾದ ಪ್ರಸನ್ನ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಮಂತ್ ಕುಮಾರ್ ಜೈನ್ ಅವರು “ದೇಶದ ಅಭಿವೃದ್ಧಿಯಲ್ಲಿ ಕಂಪೆನಿ ಸೆಕ್ರೆಟರಿಗಳ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳು ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದರು.
ಪ್ರಾಂಶುಪಾಲರಾದ ನವೀನ್ ಕುಮಾರ್ ಮರಿಕೆ ಅವರು “ಪಿ.ಯು.ಸಿ ಹಂತದಲ್ಲಿಯೇ CS/CA ತರಬೇತಿ ಪಡೆದರೆ, ವಿದ್ಯಾರ್ಥಿಗಳು ಕಿರಿಯ ವಯಸ್ಸಿನಲ್ಲೇ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು” ಎಂದು ಹೇಳಿದರು.
CS ಸಂತೋಷ್ ಪ್ರಭು ಅವರು ಕಂಪೆನಿ ಸೆಕ್ರೆಟರಿ ವೃತ್ತಿಯ ವಿವಿಧ ಹಂತಗಳು, ಪರೀಕ್ಷಾ ತಯಾರಿ ಹಾಗೂ ಯಶಸ್ಸಿನ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ನೈದಿಲೆ, ವಂದನೆಯನ್ನು ಹಂಶಿಕಾ ಸಲ್ಲಿಸಿದ್ದು, ನಿರೂಪಣೆಯನ್ನು ಯಾನ ಪೊನ್ನಮ್ಮ ನಿರ್ವಹಿಸಿದರು.











