ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಮುಂಡಾಜೆ ವಲಯದ ಕಡಿರುದ್ಯಾವರ ಕಾರ್ಯಕ್ಷೇತ್ರದಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಸಿಎ ಅಬ್ರಾಹಂರವರ ಮನೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರತ್ನಾವತಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ರುಡ್ ಸೆಟ್ ಮತ್ತು ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಸ್ವಉದ್ಯೋಗ ತರಬೇತಿಗಳಿಗೆ ಅವಕಾಶವನ್ನು ಕಲ್ಪಿಸಿದ್ದು ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗುವಂತೆ ನಮ್ಮ ಗ್ರಾಮದಲ್ಲಿಯೇ ಟೈಲರಿಂಗ್ ಕಲಿಯಲು ಅವಕಾಶವನ್ನು ಕಲ್ಪಿಸಿದ್ದು ಸದುಪಯೋಗಪಡಿಸಿಕೊಳ್ಳೋಣ ಎಂದರು.
ವಲಯದ ಮೇಲ್ವಿಚಾರಕರಾದ ಜನಾರ್ಧನ ರವರು ಟೈಲರಿಂಗ್ ತರಬೇತಿ ಪಡಕೊಂಡಲ್ಲಿ ನಮಗೆ ಹೊರಗಡೆ ಹೋಗಲು ಸಾಧ್ಯವಿಲ್ಲದಿದ್ದರೂ ಮನೆಯಲ್ಲಿಯೇ ಕುಳಿತು ಮನೆಯ ಕೆಲಸದೊಂದಿಗೆ ಸ್ವಉದ್ಯೋಗವನ್ನು ಮಾಡಲು ಉತ್ತಮ ಅವಕಾಶವಾಗಿದ್ದು ಉತ್ತಮ ರೀತಿಯಲ್ಲಿ ತರಬೇತಿಯಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಬಂಗಾಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಆನಂದ ಗೌಡ, ಒಕ್ಕೂಟದ ಅಧ್ಯಕ್ಷ ಜಗದೀಶ್ ಹಾಗೂ ಗೋಪಾಲಗೌಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಟೈಲರಿಂಗ್ ಶಿಕ್ಷಕರಾದ ಶ್ರೀಮತಿ ಪುಷ್ಪಾ ರವರು ತರಬೇತಿಗೆ ಬೇಕಾದ ಪರಿಕರಗಳ ಬಗ್ಗೆ ಸಮಯ ಪಾಲನೆಯ ಬಗ್ಗೆ ಮಾರ್ಗದರ್ಶನ ನೀಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನೆಯ ಹಿರಿಯರಾದ ಮೇರಿ ಅಬ್ರಾಹಂ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಮಧುರ ವಸಂತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಸುರೇಖ ಸ್ವಾಗತಿಸಿ, ರಶ್ಮಿ ದಾಮೋದರ್ ವಂದಿಸಿದರು.











