ಬೆಳ್ತಂಗಡಿ: “ಕುಟುಂಬ ಎಂದರೆ ಕೇವಲ ಗಂಡ-ಹೆಂಡತಿ, ಸಂಸಾರವಲ್ಲ. ವೈಚಾರಿಕ ನೆಲೆಗಟ್ಟಿನಲ್ಲಿ ದೇಶದ ಅಭಿವೃದ್ಧಿ ಮಾಡುವ ಪರಿಕಲ್ಪನೆಯೇ ಕುಟುಂಬ” ಎಂದು ಕೇಂದ್ರ ಎಂಎಸ್ಎಂಇ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಭಾರತೀಯ ಮಜ್ದೂರು ಸಂಘ (BMS) ರಾಜ್ಯ ಶಾಖೆಯ 70ನೇ ವರ್ಷಾಚರಣೆ ಸಮಾರೋಪ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಹಮ್ಮಿಕೊಂಡಿದ್ದ “ಕುಟುಂಬ ಸಂಗಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿನ ಶೇ.35ರಷ್ಟು ಸೂಕ್ಷ್ಮ ಉದ್ಯಮಗಳು ದೇಶದ ಜಿಡಿಪಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಕೃಷಿಯ ನಂತರ ಎಂಎಸ್ಎಂಇ ಗಳು ದೇಶದ ಅತಿದೊಡ್ಡ ಉದ್ಯಮವಾಗಿವೆ ಎಂದು ಅವರು ಉಲ್ಲೇಖಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, “ಬಿಎಂಎಸ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿದೆ. ಮುಂದೆಯೂ ಸರಕಾರ ಮತ್ತು ಕಾರ್ಮಿಕರ ನಡುವೆ ಸೇತುವೆಯಾಗಿ ಬಿಎಂಎಸ್ ಕಾರ್ಯ ನಿರ್ವಹಿಸಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ ಪ್ರಾಸ್ತಾವಿಕ ಮಾತನಾಡಿ, ರಾಜ್ಯಾಧ್ಯಕ್ಷ ಎನ್.ಕೆ. ಪ್ರಕಾಶ್ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಹಿಮೈ, ಅಖಿಲ ಭಾರತ ದಕ್ಷಿಣ ಮತ್ತು ದಕ್ಷಿಣ ಮಧ್ಯಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದುರೈರಾಜ್ ಹಾಗೂ ದಕ್ಷಿಣ ಮಧ್ಯಕ್ಷೇತ್ರೀಯ ನಾ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ರಾಜ್ಯ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಜಯರಾಜ್ ಸಾಲ್ಯಾನ್, ಜಿಲ್ಲೆಯ ಪದಾಧಿಕಾರಿಗಳಾದ ರೋಹಿತಾಶ್ವ, ವಸಂತ ಕುಮಾರ್ ಬಂಟ್ವಾಳ, ನಾರಾಯಣ ಪೂಜಾರಿ, ಕುಮಾರ್ ನಾಥ್ ಉಜಿರೆ, ಪ್ರಶಾಂತ್, ಕಿರಣ್ ಕುಮಾರ್, ಮಧುಸೂಧನ್ ಸುಳ್ಯ, ಪ್ರಕಾಶ್ ಸುಳ್ಯ, ರಾಜೇಶ್ ಪುತ್ತೂರು, ಪುರಂದರ ರೈ ಕುಂಬ್ರ, ಸಾಂತಪ್ಪ ಬೆಳ್ತಂಗಡಿ, ರಾಜೇಶ್ ಸುವರ್ಣ ಬೆದ್ರ, ಚಂದ್ರಶೇಖರ ಕಡಬ ಸಾಮೂವೆಲ್ ಮಂಗಳೂರು,ಮತ್ತು ಶ್ರೀಕಾಂತ್ ಬಂಟ್ವಾಳ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಭವ್ಯಗೊಳಿಸಿದರು.











