ಬೆಳ್ತಂಗಡಿ: ಉಚ್ಚಿಲ ಪೇಟೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿ ಬೈಕ್ ಸವಾರ ರಮೇಶ್ ಹೆಗ್ಡೆ (52 ವರ್ಷ) ರವರು ಸಾವನ್ನಪ್ಪಿರುವ ಘಟನೆ ಇಂದು (ಸೆ.30) ಬೆಳಗ್ಗೆ ನಡೆದಿದೆ.


ಘಟನೆ ವಿವರ: ಬೆಳಗ್ಗೆ 6 ಸುಮಾರಿಗೆ ಉಡುಪಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಬೈಕ್ ಗೆ ಉಚ್ಚಿಲ ಪೇಟೆಯ ಕೆನರಾ ಬ್ಯಾಂಕಿನ ಎ.ಟಿ.ಎಂ ಮುಂದೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಈ ವೇಳೆ ಬೈಕ್ ಸವಾರನ ಮೇಲೆ ಬೇರೆ ವಾಹನ ಕೂಡ ಹರಿದು ಹೋಗಿದೆ ಎನ್ನಲಾಗಿದೆ. ಅಂಬ್ಯುಲೆನ್ಸ್ ಮೂಲಕ ಪಡುಬಿದ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ವೇಳೆ ಪಡುಬಿದ್ರೆ ಪೊಲೀಸರು ಹಾಜರಿದ್ದರು. ಉಚ್ಚಿಲ ದಸರಾ ವೇಳೆ ಚರುಂಬುರಿ ವ್ಯಾಪಾರ ನಡೆಸುತ್ತಿದ್ದ ಇವರು ಇಂದು ಊರಿಗೆ ಬರುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.











