ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ದಿನೇಶ್ ಎಂ ಇವರು 31 ವರ್ಷಗಳ ಸೇವೆ ಸಲ್ಲಿಸಿ ಸೆ.30 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಊರಿನ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇವರು 1990 ರಲ್ಲಿ ಮುಂದುವರಿಕಾ ಧರ್ಮಸ್ಥಳ ಶಿಕ್ಷಣ ಕೇಂದ್ರದ ಪ್ರೇರಕರಾಗಿ ಕೆಲಸವನ್ನು ಮಾಡಿದ್ದು 1994ರಿಂದ ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ,ಕ್ಲರ್ಕ್ ಕೆಲಸವನ್ನು ನಿರ್ವಹಿಸಿ 2012 ಮುಂಬಡ್ತಿ ಹೊಂದಿ ಗ್ರಾಮ ಪಂಚಾಯತಿ ಲೆಕ್ಕ ಸಹಾಯಕರಾಗಿ ಹಾಗೂ 2020ರಲ್ಲಿ ಗ್ರೇಡ್ -1 ಕಾರ್ಯದರ್ಶಿಯಾಗಿ ಪುತ್ತೂರು ತಾಲೂಕಿನ ಕಬಕ ಹಾಗೂ ಉಪ್ಪಿನಂಗಡಿಯಲ್ಲಿ ಸೇವೆ ಸಲ್ಲಿಸಿದರು.
2023 ರಿಂದ ಧರ್ಮಸ್ಥಳ ಗ್ರೇಡ್ -1 ಕಾರ್ಯದರ್ಶಿಯಾಗಿ, 2024 ರಿಂದ ಧರ್ಮಸ್ಥಳ ಹಾಗೂ ಶಿಶಿಲ ಗ್ರಾಮ ಪಂಚಾಯತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2023 ರಿಂದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ 2ವರ್ಷ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಇವರು ನಿಡ್ಲೆ ಗ್ರಾಮದ ಮಜಲಿ ಮಾರು ದೇವಣ್ಣ ಗೌಡ ಮತ್ತು ತೇಜಮ್ಮ ಇವರ ಪುತ್ರರಾಗಿದ್ದು ಪ್ರಗತಿಪರ ಕೃಷಿಕರು ಕೂಡಾ ಆಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ನಿಡ್ಲೆಯಲ್ಲಿ ಪೂರೈಸಿದ ಇವರು ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುತ್ತಾರೆ. ಯಕ್ಷಗಾನ ಹಾಗೂ ನಾಟಕದ ಹವ್ಯಾಸವನ್ನು ಹೊಂದಿರುವ ಇವರು ಹಾಸ್ಯ ಕಲಾವಿದರಾಗಿದ್ದಾರೆ. ಇವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಧರ್ಮಸ್ಥಳ, ಶಿಶಿಲ, ಉಪ್ಪಿನಂಗಡಿ, ಕಬಕ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.











