ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆ. 30 ರಂದು ಆಯುಧ ಪೂಜೆಯನ್ನು ವಿಧಿವತ್ತಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಹಾಗೂ ಶ್ರೀಮತಿ ಮೈತ್ರಿ ಇವರು ಆಗಮಿಸಿ ಪೂಜಾ ವಿಧಿಗಳಿಗೆ ನೇತೃತ್ವ ವಹಿಸಿ ವಿದ್ಯಾರ್ಥಿನಿಯರನ್ನು ಆಶೀರ್ವದಿಸಿದರು.
ದಸರಾ ಹಬ್ಬದ ಒಂಬನೇ ದಿನದಲ್ಲಿ ಆಚರಿಸುವ ಹಬ್ಬ ಆಯುಧ ಪೂಜೆ. ಶ್ರಮಕ್ಕೆ ಗೌರವ, ಶ್ರಮದ ಪಾವಿತ್ರ್ಯತೆ, ಸಂಪ್ರದಾಯದ ಮೌಲ್ಯ, ಒಗ್ಗಟ್ಟು, ಆಧ್ಯಾತ್ಮಿಕತೆ ಈ ಎಲ್ಲಾ ವಿಚಾರಗಳನ್ನ ಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳು ತಮ್ಮ ಲ್ಯಾಬ್ಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ, ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು.
ಪ್ರತೀ ವರುಷ ಆಯುಧ ಪೂಜೆ ಮಾಡುವುದರಿಂದ ನಾವು ಉಪಯೋಗಿಸುವ ಆಯುಧ, ಮೆಷಿನರಿಗಳಿಂದ ಯಾವುದೇ ತೊಂದರೆಗಳು ಆಗಬಾರದು ಹಾಗೂ ಕಲಿತ ವಿದ್ಯೆ ಸಂಪೂರ್ಣವಾಗಿ ಉಪಯೋಗ ಆಗಬೇಕು ಎಂದು ಆಯುಧ ಪೂಜೆ ಹಾಗೂ ಶಾರದಾ ಪೂಜೆಯನ್ನು ಭಕ್ತಿಯಿಂದ ಆಚರಿಸಲಾಗುವುದು.
ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.











