ಬೆಳ್ತಂಗಡಿ: ಒಡಿಶಾದ ಭುಭನೇಶ್ವರ ಕಳಿಂಗ ಕ್ರೀಡಾಂಗಣದಲ್ಲಿ ಅ.10ರಿಂದ 14ರವರೆಗೆ ನಡೆದ 40ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2025 ರಲ್ಲಿ ಟ್ರಯಥ್ಲಾನ್ ಬಿ ವಿಭಾಗದಲ್ಲಿ 2739 ಅಂಕಗಳನ್ನು ಪಡೆದ ಕರ್ನಾಟಕದ ಅದ್ವಿಕಾ ಕೆಪಿ ಕಂಚಿನ ಪದಕವನ್ನು ಜಯಿಸಿದ್ದಾರೆ.

ಜೊತೆಗೆ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 14 ವಯೋಮಾನದ ಟ್ರಯಥ್ಲಾನ್ ಬಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಮಂಗಳ ಕ್ರೀಡಾಂಗಣದ ಮಂಗಳ ಅಥ್ಲೆಟಿಕ್ ಕ್ಲಬ್ ನಲ್ಲಿ ಅಂತರರಾಷ್ಟ್ರೀಯ ಕೋಚ್ ದಿನೇಶ್ ಕುಂದರ್ ರವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದವರಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಡಾ. ಅರುಣ್ ಕೆಪಿ ಮತ್ತು ಗೀತಾ ದಂಪತಿಯ ಸುಪುತ್ರಿಯಾಗಿದ್ದು, ಸೈಂಟ್ ಆಗ್ನೆಸ್ ಸಿಬಿಎಸ್ಸಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.











