ಬಂಟ್ವಾಳ : ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮ ಅ.26 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಸ್ಥಾಪನಾಧ್ಯಕ್ಷೆ ಭಾರತಿ ಶ್ರೀಧರ್ ತುಂಬೆ ವಹಿಸಿದ್ದರು.
ವೇದಿಕೆಯ ಅಧ್ಯಕ್ಷೆ ಉಷಾ ಪ್ರಭಾಕರ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವೇದಿಕೆಯು ನಡೆದುಬಂದ ದಾರಿಯನ್ನು ಮೆಲುಕು ಹಾಕಿದರು. ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ಅಧ್ಯಕ್ಷ ಕೆ ಎಸ್ ಕಾರಂತ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಸಂದೇಶ ನೀಡಿದರು. ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ. ಸುರೇಶ ತುಂಗ ‘ರಜತ ದೀವಿಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ವೇದಿಕೆಯ ಚಟುವಟಿಕೆಗಳನ್ನು ಶ್ಲಾಘಿಸಿದರು.

ನಿವೃತ್ತ ಅಧ್ಯಾಪಕಿ ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೆತ್ತವರು ಮಕ್ಕಳಿಗೆ ನೀಡಬೇಕಾದ ಸಂಸ್ಕಾರ, ಕುಟುಂಬದ ಸಾಮರಸ್ಯದ ಬಗ್ಗೆ ಮತ್ತು ಈಗಿನ ಸಮಾಜದ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದರು.
ಸಮಾರಂಭದಲ್ಲಿ ವೇದಿಕೆಯ ಹಿಂದಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ವಿಶೇಷ ಸಾದಕರಿಗೆ ಹಾಗೂ ೮೦ ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಎಲ್ಲಾ ಆಹ್ವಾನಿತ ಅಂಗಸಂಸ್ಥೆಗಳ ಮಹಿಳಾ ವೇದಿಕೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಹಾಗೂ ಬೆಳ್ತಂಗಡಿ ಅಂಗ ಸಂಸ್ಥೆಯಿಂದ ಅನೇಕ ಮಹಿಳಾ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವೇದಿಕೆಯ ಉಪಾಧ್ಯಕ್ಷೆ ಯಮುನಾ ಐಗಳ್ ಸ್ವಾಗತಿಸಿ, ಹೇಮಾ ಆರ್ ಮಯ್ಯ ಹಾಗೂ ಸರಸ್ವತಿ ಮಯ್ಯ ನಿರೂಪಿಸಿ, ಪವಿತ್ರ ವಿನಯ್ ಮಯ್ಯ ಧನ್ಯವಾದ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ವೇದಿಕೆಯ ಸದಸ್ಯೆಯರು ಅಭಿನಯಿಸಿದ ‘ನಾರೀ ಶಕ್ತಿ’ ಎಂಬ ನಾಟ್ಯ ರೂಪಕ ಜನಮನ ಗೆದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು.











