July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ನ.5: ಬೆಳ್ತಂಗಡಿ ಧರ್ಮಪ್ರಾಂತ್ಯದ ಎರಡನೆಯ ಧರ್ಮಾಧ್ಯಕ್ಷರಾದ ಅತೀ ವಂದನೀಯ ಜೇಮ್ಸ್ ಪಟ್ಟೇರಿಲ್ ಪಟ್ಟಾಭಿಷೇಕ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಎರಡನೇ ಧರ್ಮಾಧ್ಯಕ್ಷರಾಗಿ ಅತೀ ವಂದನೀಯ ಪರಮಪೂಜ್ಯ ಜೇಮ್ಸ್ ಪಟ್ಟೇರಿಲ್ ರವರ ಧರ್ಮಾಧ್ಯಕ್ಷ ಪಟ್ಟಾಭಿಷೇಕ ಹಾಗೂ ಅಧಿಕಾರ ಸ್ವೀಕಾರ ಸಮಾರಂಭ ನ.5ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಸಂತ ಲಾರೆನ್ಸ್ ಕ್ಯಾಥೆಡ್ರೆಲ್ ಚರ್ಚ್‌ನಲ್ಲಿ ಆದ್ದೂರಿಯಾಗಿ ನಡೆಯಲಿದೆ ಎಂದು ಧರ್ಮಪ್ರಾಂತ್ಯದ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಐಸಾಕ್ ಅವರು ಹೇಳಿದರು.

ಅವರು ನ.3ರಂದು ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೂತನ ಧರ್ಮಾಧ್ಯಕ್ಷರ ಪಟ್ಟಾಭೀಷೇಕ ಕಾರ್ಯಕ್ರಮದ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಸೀರೋಮಲಬಾರ್ ಧರ್ಮಸಭೆಯ ಮಹಾಧರ್ಮಾಧ್ಯಕ್ಷರಾದ ಅತೀವಂದನೀಯ ರಾಫೇಲ್ ತಟ್ಟಿಲ್ ಅವರ ಶುಭಾಶೀರ್ವಾಗಳೊಂದಿಗೆ, ಬೆಂಗಳೂರಿನ ಆರ್ಚ್ ಬಿಷಪ್ಅತಿ ವಂದನೀಯ ಪೂಜ್ಯ ಡಾ. ಪೀಟರ್ ಮಚಾಡೋ ಕಾರ್ಯಕ್ರಮನ್ನು ಉದ್ಘಾಟಿಸಲಿದ್ದಾರೆ. ಆರ್ಚ್ ಬಿಷಪ್, ಮಾರ್ ಆಂಡ್ರಸ್ ತಾಯತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತೀವಂದನೀಯ. ಡಾ. ಜೋಸೆಫ್ ಪಾಮ್ನಾನಿ, ತಲಶೇರಿ ಆರ್ಚ್‌ಬಿಷಪ್, ಕ್ಯಾಥೋಲಿಕ್ ಬಿಷಪ್ಸ್ ಕಾನ್ಸರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಅಧ್ಯಕ್ಷರು, ರೆವ್. ಮ್ಯಾ. ಅಂಡ್ರಿಯಾ ಫ್ರಾನ್ಸಿಯಾ, ಅಪೋಸ್ಟೋಲಿಕ್ ನುನ್ಸಿಯೊ ಅವರ ಉಪ ಮುಖ್ಯಸ್ಥರು, ಮತ್ತು ರೆವ್. ಫಾ. ಮ್ಯಾಥ್ಯು ವಟ್ಟಮಟ್ಟಮ್ ಸಿಎಂಎಫ್, ಕಾರೆಟಿಯನ್ಸ್‌ನ ಸುಪೀರಿಯರ್ ಜನರಲ್, ರೋಮ್, ಹಾಗೂ ಭಾರತದಾದ್ಯಂತದ ಹಲವಾರು ಆರ್ಚ್ ಬಿಷಪ್‌ಗಳು ಮತ್ತು ಬಿಷಪ್‌ಗಳು ಭಾಗವಹಿಸಲಿದ್ದಾರೆ ಎಂದರು.

ದೇಶದ ವಿವಿಧ ಕಡೆಗಳಿಂದ ಸುಮಾರು 359ಕ್ಕೂ ಮಕ್ಕಿ ಧರ್ಮಗರುಗಳು, 250ಕ್ಕೂ ಮಿಕ್ಕಿ ಧರ್ಮಭಗೀನಿಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ಸಾವಿರಕ್ಕಿಂತ ಅಧಿಕ ಜನರು ಭಾಗವಹಿಸಲಿದ್ದಾರೆ. ಪಟ್ಟಾಭೀಷೇಕ ಕಾರ್ಯಕ್ರಮದ ಬಗ್ಗೆ ಭರದ ಸಿದ್ದತೆಗಳು ನಡೆಯುತ್ತಿದೆ. ನೂತನ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಜೇಮ್ಸ್ ಪಟ್ಟೆರಿಲ್ ಅವರು ನಮ್ಮದೇ ತಾಲೂಕಿನ ಕಳೆಂಜ ಗ್ರಾಮದ ಬಟ್ಯಾರು ನಿವಾಸಿಯಾಗಿದ್ದು, ಸ್ಥಳೀಯ ಶಾಲೆಯಲ್ಲಿ ಕಲಿತಿದ್ದರು ಎಂದು ತಿಳಿಸಿದರು.


ಕಾರ್ಯಕ್ರಮ ಸಂಯೋಜಕರಾದ ವಿಕಾರ್ ಜನರಲ್ ಜೋಸ್ ವಲಯ ಪರಂಬಿಲ್ ಅವರು ಮಾತನಾಡಿ, ಧರ್ಮಾಧ್ಯಕ್ಷ ದೀಕ್ಷೆಯು ಒಂದು ಪವಿತ್ರ ಧಾರ್ಮಿಕ ಆಚರಣೆಯಾಗಿದ್ದು ನಂತರ ಹೊಸ ಧರ್ಮಾಧ್ಯಕ್ಷರಾಗಿ ಸ್ಥಾನಾರೋಹಿತರಾಗುವ ಅತೀ ವಂದನೀಯ ಜೇಮ್ಸ್ ಪಟ್ಟೇರಿಲ್ ಮತ್ತು ನಿವೃತಿಗೊಳ್ಳುತಿರುವ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರಿಗೂ ಶುಭಕೋರಲು ಒಂದು ಸಾರ್ವಜನಿಕ ಸಮ್ಮೇಳನವು ಹಮ್ಮಿಕೊಳ್ಳಲಾಗಿದೆ. ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಕಳೆದ 26 ವರ್ಷಗಳಿಂದ ಧರ್ಮಪ್ರಾಂತ್ಯವನ್ನು ಮುನ್ನಡೆಸುತ್ತಿದ್ದು ಅವರು ಈಗ ನಿವೃತ್ತಿಗೊಳ್ಳುತ್ತಿದ್ದಾರೆ. ಕಳೆದ 26ವರ್ಷಗಳಲ್ಲಿ ದೇವರು ಪರಮಪೂಜ್ಯ ಲಾರೆನ್ಸ್ ರವರ ಮುಖಾಂತರ ಈ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ. ಈ ನಾಡಿನ ಜನತೆಗೆ ನೀಡಿದ ಎಲ್ಲ ಅನುಗ್ರಹಗಳಿಗೆ ಧರ್ಮಪ್ರಾಂತ್ಯವು ಚಿರಋಣಿಯಾಗಿದೆ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರ ಕೊಡುಗೆ ಅಪಾರವಾದುದ್ದು. ಅದರಲ್ಲೂ ಪ್ರಧಾನವಾಗಿ ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾಡಿದ ಕೊಡುಗೆ ಅದ್ವಿತೀಯ.
ನಿವೃತ್ತರಾಗುವ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಬೆಳ್ತಂಗಡಿ ಲಾಯಿಲದಲ್ಲಿರುವ ವಿಯಾನ್ನಿ ಸದನದಲ್ಲಿ ನಿವೃತ್ತಿ ಜೀವನವನ್ನು ಕಳೆಯಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಸಮಿತಿಯ ಸದಸ್ಯರಾದ ಜೈಸನ್ ಪಟ್ಟೇರಿ, ಐವಾನ್, ಆಲ್ವಿನ್ ಉಪಸ್ಥಿತರಿದ್ದರು.

Related posts

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಚ್ಚ ಭಾರತ ಅಭಿಯಾನದ ಕುರಿತು ವಿಶೇಷ ಉಪನ್ಯಾಸ

Suddi Udaya

ಕೊಕ್ಕಡದಲ್ಲಿ ಸತ್ಯ ಸುದ್ದಿ ನ್ಯೂಸ್ ಕಛೇರಿ ಮತ್ತು ವೆಬ್ ಸೈಟ್ ಲೋಕಾರ್ಪಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿಗಳ ವಾರ್ಷಿಕ ಸಮ್ಮೇಳನ ಉದ್ಘಾಟನೆ

Suddi Udaya

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ನಾರಾವಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya

ಬರೆಂಗಾಯ ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ಸಹ ದೈವಗಳಿಗೆ ವರ್ಷಾವಧಿ ನೇಮೋತ್ಸವ ಹಾಗೂ ದೊಂಪದ ಬಲಿ ಉತ್ಸವ

Suddi Udaya
error: Content is protected !!