ಬೆಳ್ತಂಗಡಿ : ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ನಗರ ಸಮಿತಿ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಕಲರವ ಕಾರ್ಯಕ್ರಮ WIM ನಗರ ಸಮಿತಿ ಅಧ್ಯಕ್ಷೆ ಸಫ್ರಾ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಕಚೇರಿಯ ಹಾಲ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ವಿಮ್ ಕ್ಷೇತ್ರ ಸಮಿತಿ ಅಧ್ಯಕ್ಷೆ ಸಮಾ ಉಜಿರೆ, “ಮಕ್ಕಳ ಕನಸುಗಳಿಗೆ ರೆಕ್ಕೆಗಳನ್ನು ಕೊಡುವುದು, ನಿರ್ಭಯವಾಗಿ ಆಲೋಚಿಸಲು, ಅಭಿವ್ಯಕ್ತಿಸಲು ಸುರಕ್ಷಿತ ಮತ್ತು ಪೋಷಕವಾದ ವಾತಾವರಣವನ್ನು ನಾವು ಸೃಷ್ಟಿಸಿಕೊಡಬೇಕು. ಅವರ ವೈಶಿಷ್ಟ್ಯತೆಯನ್ನು ಗುರುತಿಸಿ, ಅವರ ಕಲ್ಪನಾಶಕ್ತಿಯನ್ನು ಪ್ರೋತ್ಸಾಹಿಸಬೇಕು. ಆ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಭವಿಷ್ಯದ ಸಮಾಜಕ್ಕೆ ಮಕ್ಕಳನ್ನು ಅರ್ಪಿಸುವ ಜವಾಬ್ದಾರಿ ಪೋಷಕರಾದ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಬೆಳ್ತಂಗಡಿ ವಕೀಲೆಯಾದ ಅಸ್ಮಾ ರವರು ಮಾತನಾಡಿ, ಮಕ್ಕಳ ಕನಸುಗಳೇ ನಾಳೆಯ ವಾಸ್ತವಿಕತೆ. ನಿಮ್ಮ ಪ್ರತಿ ಚಿಕ್ಕ ಹೆಜ್ಜೆಯೂ ಈ ಜಗತ್ತನ್ನು ಸುಂದರವಾಗಿ ಮಾರ್ಪಡಿಸುವ ಸಾಮರ್ಥ್ಯ ಹೊಂದಿದೆ. ನಿಮ್ಮ ಮನಸ್ಸಿನಲ್ಲಿ ಹುದುಗಿರುವ ಅನಂತ ಸಾಮರ್ಥ್ಯ, ಕಲ್ಪನಾಶಕ್ತಿ ಮತ್ತು ಕುತೂಹಲವೇ ನಿಮ್ಮ ದೊಡ್ಡ ಸಂಪತ್ತು. ಕಲಿಯಿರಿ, ಆಡಿರಿ, ಸವಿಯಿರಿ. ಪ್ರಶ್ನಿಸಿ, ಸೃಷ್ಟಿಸಿ, ಸಾಧಿಸಿ. ನಿಮ್ಮ ಆಲೋಚನೆಗಳಿಗೆ ಅವಕಾಶ ನೀಡಿ. ನೀವು ಬೆಳೆಯುವಾಗ, ದಯೆ, ಸಹಾನುಭೂತಿ, ಸಹಕಾರ ಮತ್ತು ಗೌರವದ ಮೌಲ್ಯಗಳನ್ನು ಎಂದಿಗೂ ಮರೆಯಬೇಡಿ. ಒಬ್ಬರಿಗೊಬ್ಬರು ಸಹಾಯ ಮಾಡುವ ಮನುಷ್ಯರು ಆಗಿರಿ. ನಿಮ್ಮನ್ನು ನಂಬಿರಿ, ನಿಮ್ಮ ಕನಸುಗಳನ್ನು ಹಿಂಬಾಲಿಸಿರಿ ಎಂದು ಮಕ್ಕಳಿಗೆ ಕಿವಿ ಮಾತು ನೀಡಿ ಮಕ್ಕಳ ಆಚರಣೆಯ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಮೀಮಾ ಸಂಜಯ ನಗರ, ಕ್ಷೇತ್ರ ಸಮಿತಿ ಕಾರ್ಯದರ್ಶಿ ರುಬಿಯಾ ಉಪಸ್ಥಿತರಿದ್ದರು.
ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ,ದೇಶ ಭಕ್ತಿ ಗೀತೆ, ಚಿತ್ರ ಸ್ಪರ್ಧೆ,ಭಾಷಣ ಸ್ಪರ್ಧೆ,ಸನ್ಮಾನ ಕಾರ್ಯಕ್ರಮ, ಆಯೋಜಿಸಲಾಯಿತು. ಪ್ರತಿಭೆಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು .
ಕಾರ್ಯಕ್ರಮದಲ್ಲಿ ಸೌದಾ ಸ್ವಾಗತಿಸಿ, ಹಸೀನಾ ವಂದಿಸಿದರು. ರಫಾ ಕಾರ್ಯಕ್ರಮ ನಿರೂಪಿಸಿದರು.











