ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನ ಶಾಖೆ, ಇಲ್ಲಿ ನಡೆಯುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ತರಗತಿಯಲ್ಲಿ ಮಾತೃವಂದನ, ಮಾತೃಧ್ಯಾನ ಮಾತೃ ಭೋಜನ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಯೋಗ ತರಗತಿಯ ಸಹ ಶಿಕ್ಷಕರಾದ ಶ್ರೀಮತಿ ಕೋಮಲ ಪ್ರಕಾಶ್ ವಹಿಸಿದ್ದು ಅಮ್ಮನ ಪ್ರೀತಿಯ ಬಗ್ಗೆ ಮಾತನಾಡಿದರು. ಮುಖ್ಯ ಅಭ್ಯಾಗತರಾಗಿ ಸಮಾಜ ಮಂದಿರ ಬಿಲ್ಡಿಂಗ್ ಸೊಸೈಟಿ, ಬೆಳ್ತಂಗಡಿ ಇದರ ಸದಸ್ಯರಾದ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಇವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತ ಜೀವನದಲ್ಲಿ ಮಾತೃಪ್ರೇಮದ ಮಹತ್ವವನ್ನು ಕೊಂಡಾಡಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಹ ಸಂಚಾಲಕ ಲೋಕೇಶ್ ಪೊಳಲಿ ಇವರು ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಾಡಿ ಮಾತೃಧ್ಯಾನವನ್ನು ಮಾಡಿಸಿದರು. ಸುಮಾರು 400 ಮಂದಿ ಯೋಗ ಬಂಧುಗಳು ಹಾಗೂ ಯೋಗೇತರ ಬಂಧುಗಳು ಈ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದರು. ಹಣತೆಯ ಬೆಳಕಿನಲ್ಲಿ ಮಾತೃ- ಪಿತೃಗಳ ಸ್ವರೂಪವನ್ನು ಧ್ಯಾನಿಸಿ ನಮ್ಮ ಜೀವನದಲ್ಲಿ ಅವರ ಪಾತ್ರ, ಪ್ರೀತಿ ,ಮಹತ್ವ ತಿಳಿಸುತ್ತಾ ಎಲ್ಲರ ಕಣ್ಣಂಚು ಒದ್ದೆಯಾದ ಆ ಅಪೂರ್ವ ಕ್ಷಣವನ್ನು ಅವಿಸ್ಮರಣೀಯವಾಗಿಸಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಸಂಸ್ಕಾರ- ಸಂಘಟನೆ- ಸೇವೆ ಎಂಬ ಧ್ಯೇಯವನ್ನು ಇಟ್ಟುಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಗವನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಪುತ್ತೂರು ತಾಲೂಕು ಸಂಚಾಲಕರಾದ ಕೃಷ್ಣಾನಂದ ನವರು ಎಲ್ಲಾ ಯೋಗಬಂಧುಗಳಿಗೆ ವಿವಿಧ ಮನೋಲ್ಲಾಸದ ಆಟಗಳನ್ನಾಡಿಸಿ, ನಗುವೇ ಯೋಗದ ಮೂಲಕ ಎಲ್ಲರನ್ನು ನಕ್ಕುನಗಿಸಿದರು.
ಕಾರ್ಯಕ್ರಮದಲ್ಲಿ ಯೋಗ ತರಗತಿಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪ್ರೇಮಲತಾ ಗಣೇಶ್ ಹಾಗೂ ಸಹ ಶಿಕ್ಷಕರಾದ ಸುಕೇಶ್ ಗೇರುಕಟ್ಟೆ, ಸಂತೋಷ್ ಕಾಪಿನಡ್ಕ, ಗಣೇಶ್ ಪ್ರಸಾದ್ ಬೆಳ್ತಂಗಡಿ, ಶಶಿಕಲಾ ವಿಶ್ವನಾಥ್, ಎಸ್ ಪಿ ವೈ ಎಸ್ ಎಸ್ ನ ಪುತ್ತೂರು ತಾಲೂಕು ಸಂಚಾಲಕರಾದ ಕೃಷ್ಣಾನಂದ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.











