ಬೆಳ್ತಂಗಡಿ: ವೆನ್ಲಾಕ್ ರಕ್ಷಾ ಸಮಿತಿಯ ಸಭೆಯು ವೈದ್ಯಕೀಯ ಅಧೀಕ್ಷಕರ ಕಛೇರಿಯಲ್ಲಿ ನ.18 ರಂದು ನಡೆಯಿತು. ಈ ಸಭೆಯಲ್ಲಿ ರಕ್ಷಾ ಸಮಿತಿಗೆ ಬೆಳ್ತಂಗಡಿ ತಾಲೂಕಿನಿಂದ ನಾಮನಿರ್ದೇಶಿತರಾಗಿರುವ ಕಳಿಯ ಗ್ರಾ.ಪಂ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಮತ್ತು ತಾ.ಪಂ ಮಾಜಿ ಸದಸ್ಯ ಜಯರಾಮ ಭಾಗಿಯಾದರು.
ಸಭೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಗಳು ಜನಸ್ನೇಹಿಯಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಲು ಮತ್ತು ಹೊರ ಜಿಲ್ಲೆಗಳಿಂದ ಅತೀ ಹೆಚ್ಚು ರೋಗಿಗಳು ತುರ್ತು ಚಿಕಿತ್ಸೆಗಾಗಿ ಬರುವುದರಿಂದ ನಮ್ಮ ಜಿಲ್ಲೆಯ ರೋಗಿಗಳಿಗೆ ತುರ್ತು ಐ ಸಿ ಯು ಲಭ್ಯ ಇಲ್ಲದೇ ಬಡವರು ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಹೆಚ್ಚುವರಿ ಐ ಸಿ ಯು ವ್ಯವಸ್ಥೆ ಮಾಡಲು ಕ್ರಮವಹಿಸುವಂತೆ ಆಗ್ರಹಿಸಿದರು.
ಆಸ್ಪತ್ರೆಯ ಆವರಣದ ಒಳಗೆ ಖಾಸಗಿ ಆಂಬುಲೆನ್ಸ್ ಗಳ ನಿಲುಗಡೆಗೆ ಕಡಿವಾಣ ಹಾಕುವಂತೆ ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್., ಸಮಿತಿಯ ಇತರ ಸದಸ್ಯರಾದ ಪದ್ಮನಾಭ ಅಮೀನ್, ಶ್ರೀಮತಿ ಪ್ರಮೀಳಾ ಈಶ್ವರ್, ಅನಿಲ್ ರಸ್ಕಿನ್ಹಾ, ಅಬ್ದುಲ್ ಸಲೀಮ್, ಶಶಿಧರ ಬಜಾಲ್, ದಾಮೋದರ ಪುತ್ತೂರು ಹಾಜರಿದ್ದರು.











