ಬೆಳ್ತಂಗಡಿ: ತಾಲೂಕಿನಲ್ಲಿ ‘ಮಾಜೀ ಸೈನಿಕರ ಸಂಘ (ರಿ) ಬೆಳ್ತಂಗಡಿ’ ಇದಕ್ಕೆ ಪರ್ಯಾಯವಾದ ಯಾವುದೇ ಮಾಜಿ ಸೈನಿಕರ ಸಂಘವಿರುವುದಿಲ್ಲ. ಪ್ರಸ್ತುತ ಕಾರ್ಯಚರಿಸುತ್ತಿರುವ ಸಂಘವು ಬಲಿಷ್ಠವಾಗಿ ತಾಲೂಕಿನಲ್ಲಿ ಕಾರ್ಯಚರಿಸುತ್ತಿದ್ದು, ಸೇನೆಯ ಯಾವುದೇ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕರಾಗಲಿ, ವೀರನಾರಿಯರಾಗಲಿ,ಕುಟುಂಬ ಸದಸ್ಯರಾಗಲಿ ಅಥವಾ ತಾಲೂಕಿನ ಸಾರ್ವಜನಿಕರಾಗಲಿ ತಪ್ಪು ವದಂತಿಗಳಿಗೆ ಕಿವಿಗೊಡದೆ ಗೊಂದಲಕ್ಕೀಡಾಗಬಾರದು ಎಂದು ಸಂಘದ ಅಧ್ಯಕ್ಷ ಮಹಮ್ಮದ್ ರಫೀ ಹೇಳಿದರು.
ಅವರು ಡಿ.೮ರಂದು ಬೆಳ್ತಂಗಡಿ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿಗೆ ಮಾಧ್ಯಮವೊಂದರಲ್ಲಿ ‘ಮಾಜಿ ಸೈನಿಕರ ಸಂಘ (ರಿ) ಬೆಳ್ತಂಗಡಿ’ ಇದು ವಾಯುಪಡೆಯ ಸೈನಿಕರು ಶ್ರೇಷ್ಠ ಹಾಗೂ ಭೂಪಡೆಯ ಸೈನಿಕರು ಕನಿಷ್ಠ ಎಂಬ ಭಾವನೆಯಿದ್ದು ಸ್ಥಾಪಿತ ಹಿತಾಸಕ್ತಿಗಳ ಕೈಯಲ್ಲಿ ನಲುಗಿ ಗಬ್ಬೆದ್ದು ಹೋಗಿದೆ ಎಂದು ಬಂದಿರುತ್ತದೆ. ಇದು ಕೇವಲ ಮಾಜಿ ಸೈನಿಕರು ಮಾತ್ರವಲ್ಲ ಇಡೀ ದೇಶದ ಸೈನಿಕರಿಗೆ ಮಾಡಿರುವ ಅವಮಾನ ಎಂದು ಹೇಳಿದರು.
ಈ ವಿಷಯದಲ್ಲಿ ಸದಸ್ಯರಾದ ಎನ್.ಪಿ ತಂಗಚ್ಚನ್, ಎಸ್ಬಿಐ ಬೆಳ್ತಂಗಡಿ ಭದ್ರತಾ ಸಿಬ್ಬಂದಿ ಸುರೇಶ್ ಕುಮಾರ್ ಗೌಡ ಹಾಗೂ ಕೆಎಸ್ಸಾರ್ಟಿಸಿ ಧರ್ಮಸ್ಥಳ ಘಟಕ ನೌಕರ ವಾಲ್ಟರ್ ಸೀಕ್ವೆರಾ ಹಾಗೂ ಹಲವಾರು ಸದಸ್ಯರನ್ನು ವಿಚಾರಿಸಿದಾಗ, ಈ ವಿಷಯ ನಮ್ಮ ಯಾರ ಗಮನಕ್ಕೂ ಯಾರೂ ತಂದಿರುವುದಿಲ್ಲ, ಮಾಜಿ ಸೈನಿಕರ ಸಂಘದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ವಿಷಯವನ್ನು ನಾವು ಯಾರು ಒಪ್ಪುವುದಿಲ್ಲ ಹಾಗೂ ಸಂಘದಲ್ಲಿ ಈ ಬಗ್ಗೆ ನಮಗೆ ಅಭಿಮಾನವಿದೆ ಇನ್ನು ಮುಂದೆಯೂ ಸಂಘದ ಘನತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಸಂಘದ ಹಿತದೃಷ್ಟಿಯಿಂದ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತೇವೆ ಎಂಬ ಅಭಿಪ್ರಾಯವನ್ನು ತಿಳಿಸಿರುತ್ತಾರೆ ಎಂದರು.
ಮಾಜಿ ಸೈನಿಕರ ಸಂಘದಲ್ಲಿ ವಾಯು ಸೇನೆ, ಭೂ ಸೇನೆ ಹಾಗೂ ಜಲ ಸೇನೆಯಲ್ಲಿ ಸುದೀರ್ಘವಾಗಿ ತಾಯಿ ಭಾರತಾಂಬೆಯ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಬಳಿಕ ಮರಳಿ ಸಮಾಜಕ್ಕೆ ಎಂಬ ಧೈಯ ವಾಕ್ಯದೊಂದಿಗೆ ಕಳೆದ ಸುಮಾರು ೨೦ ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ಶಿಸ್ತು ಬದ್ಧವಾಗಿ ಸಮಾಜಮುಖಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ತಾಲೂಕಿನಾದ್ಯಂತ ಮಾಡಿ ಮನೆಮಾತಾಗಿರುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಮೇ|ಜ| ಎಂ.ವಿ ಭಟ್, ಮಾಜಿ ಅಧ್ಯಕ್ಷ ಕೆ. ಸುನೀಲ್ ಶೆಣೈ, ಖಜಾಂಚಿ ಜಗದೀಶ್ಚಂದ್ರ, ಉಪಾಧ್ಯಕ್ಷ ಜನಾರ್ದನ್ ಉಪಸ್ಥಿತರಿದ್ದರು.











