ಬೆಳ್ತಂಗಡಿ: ಬೆಳ್ತಂಗಡಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಫೈರ್ ಅಂಡ್ ಸೇಫ್ಟಿ ಕೋರ್ಸ್ ಪ್ರಾರಂಭಿಸಿ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗಿದ್ದು ಈ ಫೈರ್ ಅಂಡ್ ಸೇಫ್ಟಿ ಕೋರ್ಸ್ನ ತರಬೇತಿಯ ಭಾಗವಾಗಿ ಡಿ. 16 ರಂದು ಕಾಲೇಜಿನ ವಿದ್ಯಾರ್ಥಿಗಳು ಬೆಳ್ತಂಗಡಿ ಅಗ್ನಿಶಾಮಕ ಘಟಕಕ್ಕೆ ಶೈಕ್ಷಣಿಕ ಭೇಟಿ ನೀಡಿದರು.

ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಮೇಲಿನ ಜವಾಬ್ದಾರಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಎಂ. ಜಿ. ತಲ್ಹತ್ ವಹಿಸಿಕೊಂಡು ಶಿಕ್ಷಣದ ಜೊತೆಗೆ ಪ್ರಾಯೋಗಿಕ ತರಬೇತಿಗೂ ಸಮಾನ ಮಹತ್ವ ನೀಡುವ ಅವರ ನೇತೃತ್ವವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುತ್ತಿದೆ ಎಂದು ಪ್ರಶಂಸಿಸಲಾಯಿತು.
ಲೀಡಿಂಗ್ ಫೈರ್ಮ್ಯಾನ್ ಉಸ್ಮಾನ್ ಗರ್ಡಾಡಿ ಅವರು ತಮ್ಮ ವಿಶಾಲ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಗ್ನಿ ನಿಯಂತ್ರಣ ಕ್ರಮಗಳು, ಅಪಾಯ ನಿರ್ವಹಣೆ (Risk Management), ರಿಸ್ಕ್ಯೂ ಕಾರ್ಯಾಚರಣೆಗಳು, ತುರ್ತು ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಫೈರ್ ಅಂಡ್ ಸೇಫ್ಟಿ ಉಪಕರಣಗಳ ಬಳಕೆಯ ಕುರಿತು ನೇರ ಪ್ರಾತ್ಯಕ್ಷಿಕೆ (Live Demonstration) ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಪ್ರಾಯೋಗಿಕ ತರಬೇತಿ ನೀಡಿದರು.

ಫೈರ್ ಅಂಡ್ ಸೇಫ್ಟಿ ವಿಭಾಗದ ಶಿಕ್ಷಕಿ ಶ್ರೀಮತಿ ಅಂಕಿತ, ಹಾಗೂ ಸಂಸ್ಥೆಯ ಮ್ಯಾನೇಜರ್ ಶಮೀಮಾ ನೆರಿಯ ಸಹಕರಿಸಿದರು. ಸಂಸ್ಥೆಯ ನಿರ್ದೇಶಕರಾದ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಮತ್ತು ಅಬ್ದುಲ್ ಖಾದರ್ ನಾವೂರು ಅವರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು.
ಬೆಳ್ತಂಗಡಿ ಅಗ್ನಿಶಾಮಕ ಘಟಕದ ಸಹಾಯಕ ಠಾಣಾಧಿಕಾರಿ ಕೆ. ನೀಲಯ ಗೌಡ, ಅಗ್ನಿಶಾಮಕ ಸಿಬ್ಬಂದಿಗಳಾದ ವೆಂಕಣ್ಣ ಹಂಚಿನಾಳ, ಶ್ರವಣ್ ನಾಯಕ, ಮಲಗೌಡ ಪಾಟೀಲ ಮತ್ತು ಶ್ರೀಶೈಲ ಬಿ. ಕಂಬಿ ಅವರು ಸಹಕರಿಸಿದರು.











