September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ರೇಡಿಯೋ‌ ನಿನಾದ 90.4 ಎಫ್ ಎಂ; ಸಮುದಾಯ ಬಾನುಲಿಯಲ್ಲಿ‌ ಬ್ಯಾರಿ‌ ಕಾರ್ಯಕ್ರಮ ಪ್ರಸಾರದ ಬಗ್ಗೆ ಸಮಾಲೋಚನೆ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ನಿನಾದ 90.4 ಎಫ್ಎಂನಲ್ಲಿ ಬ್ಯಾರಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ಕುರಿತು ಸಮಾಲೋಚನಾ ಸಭೆ ಡಿ.20ರಂದು ಕಾರ್ಯಕ್ರಮ ಸಂಯೋಜಕ ವಿ.ಕೆ. ಕಡಬ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ವೇಣೂರು ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಮಹಮ್ಮದ್ ವೇಣೂರು ಅವರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಅಧೀನದ ಸಮುದಾಯ ಬಾನುಲಿಯಲ್ಲಿ ಬ್ಯಾರಿ ಭಾಷೆಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಸಾಮಾಜಿಕ ಸೌಹಾರ್ದ ಮತ್ತು ಭಾಷಾ ವೈವಿಧ್ಯದ ಅರಿವು ಮೂಡಿಸುವಲ್ಲಿ ಈ ಕಾರ್ಯಕ್ರಮ ಪ್ರಮುಖ ಭಾಗವಾಗಲಿದ್ದು, ಇದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.

ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಗತಿಪರ ಕೃಷಿಕ ಸಯ್ಯದ್ ಹಸನ್ ವೇಣೂರು ಮಾತನಾಡಿ, ಬ್ಯಾರಿ ಹಬ್ಬಗಳು, ಆಚರಣೆಗಳು ಮತ್ತು ಆಹಾರ ಸಂಸ್ಕೃತಿ ಕುರಿತ ಕಾರ್ಯಕ್ರಮಗಳ ಜೊತೆಗೆ ಸಮುದಾಯಕ್ಕೆ ಬೇಕಾದ ಅರಿವು ಕಾರ್ಯಕ್ರಮಗಳು ಬಿತ್ತರವಾಗಬೇಕು, ಈ ಕಾರ್ಯಕ್ರಮಗಳನ್ನು ಆಲಿಸುವ ಕೇಳುಗ ವರ್ಗವನ್ನೂ ಸೃಷ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ವಕ್ಫ್ ಬೋರ್ಡ್ ಜಿಲ್ಲಾ ಸಮಿತಿ ಮಾಜಿ ಸದಸ್ಯ ಯು.ಕೆ. ಮಹಮ್ಮದ್ ಹನಿಫ್ ಉಜಿರೆ ಮಾತನಾಡಿ, ಸಮುದಾಯದ ಸಂಘಟನೆ, ಮಸೀದಿಗಳಲ್ಲಿ ಕಾರ್ಯಕ್ರಮಗಳ ವಿವರ ಹಾಕುವ ಮೂಲಕ ಪ್ರಚಾರ ಮಾಡಬೇಕೆಂದರು.

ಉಜಿರೆ ಹಳೆಪೇಟೆ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ, ಉದ್ಯಮಿ ಅಬುಬಕ್ಕರ್ ಯು.ಹೆಚ್. ಮಾತನಾಡಿ, ನಿನಾದದಲ್ಲಿ ಬ್ಯಾರಿ ಭಾಷೆಯ ಕಾರ್ಯಕ್ರಮ ಪ್ರಸಾರಕ್ಕೆ ಮುಂದಾಗಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯಾಗಿದೆ ಎಂದರು.

ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ ಮಾತನಾಡಿ, ಬ್ಯಾರಿ ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇರುವ ಸಾಧಕರಿದ್ದಾರೆ. ಅವರ ವಿವರಗಳನ್ನು ಸಂಗ್ರಹಿಸಿ ಬಾನುಲಿ ಕೇಂದ್ರದ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯವಾಗಬೇಕು, ಬ್ಯಾರಿ ಸಮುದಾಯದ ಮೂಲ ಸಾಂಪ್ರದಾಯಿಕ ಆಚರಣೆಗಳು, ಜನಪದ ಹಾಡುಗಳು ಯುವ ತಲೆಮಾರಿಗೆ ಮತ್ತೆ ದಾಟಿಸುವಂತಾಗಬೇಕೆಂದರು.

ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಸಾಜೀದಾ ಮಾತನಾಡಿ, ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡುವುದು ವಿರಳ. ಹಾಗಾಗಿ ಶೈಕ್ಷಣಿಕ ಮಾಹಿತಿ ಕುರಿತು ಕಾರ್ಯಕ್ರಮ ಸಿದ್ಧಪಡಿಸಬೇಕೆಂದರು.

ಎಸ್.ಡಿ.ಎಂ. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಫಾತಿಮಾ ಸಫೀರಾ ಮಾತನಾಡಿ, ವಿದ್ಯಾರ್ಥಿಗಳ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಲು ಸಹಕಾರ ನೀಡುವುದಾಗಿ ತಿಳಿಸಿದರು.

ಸೇರಿದ ಎಲ್ಲರ ನಿರ್ಣಯದಂತೆ ಮುಂದಿನ ದಿನಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕೆ ‘ಬ್ಯಾರಿಂಙಲೆ ಪಲಕ’ ಎಂದು ಶೀರ್ಷಿಕೆ ಸೂಚಿಸಲಾಯಿತು.

Related posts

ನಿಡ್ಲೆ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ನ.13: ದೀಪಾವಳಿ ಹಬ್ಬದ ಪ್ರಯುಕ್ತ ಕುಸಲ್ದ ಜವನೆರ್ ಬದ್ಯಾರು – ಶಿರ್ಲಾಲು ಇದರ ವತಿಯಿಂದ 5ನೇ ವರ್ಷದ ‘ಕೆಸರ್ ಡೊಂಜಿ ಕುಸಲ್ದ ಗೊಬ್ಬು’ ಕಾರ್ಯಕ್ರಮ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ನಿಡಿಗಲ್ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮಹಾಸಭೆ: ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಷಾ ಆಯ್ಕೆ

Suddi Udaya

ಕೊಕ್ಕಡದ ಕಿಟ್ಟ ಮಲೆಕುಡಿಯರವರಿಗೆ ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ ಪ್ರದಾನ

Suddi Udaya

ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವ ಉದ್ದೇಶ ಹಾಗೂ ಆದರ್ಶ ಗಣೇಶೋತ್ಸವದ ಆಚರಣೆ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಾಹಿತಿ

Suddi Udaya
error: Content is protected !!