ಬಂಟ್ವಾಳ : ಶ್ರೀ ದುರ್ಗಾ ಫ್ರೆಂಡ್ಸ್ (ರಿ.), ಕಲ್ಲಡ್ಕ ಇರ್ವತ್ತೂರು ಇದರ ಸಹಯೋಗದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಮಂಗಳೂರು ಮತ್ತು ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ವಿಭಾಗ) ಮಂಗಳೂರು ಹಾಗೂ ಎ.ಜೆ. ದಂತ ವೈದ್ಯಕೀಯ ಆಸ್ಪತ್ರೆ ಮಂಗಳೂರು ಇದರ ಆಶ್ರಯದಲ್ಲಿ ಪದವುವಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಬೃಹತ್ ರಕ್ತದಾನ ಮತ್ತು ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರ ನಡೆಯಿತು.

ಶಿಬಿರವನ್ನು ಶ್ರೀಪಾದ ಪಾಂಗಣ್ಣಾಯ ತಂತ್ರಿಗಳು ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದು ಒಂದು ಮಹತ್ತರವಾದ ಕಾರ್ಯ. ಈ ಶಿಬಿರವು ಸೇವೆಯ ಜೊತೆಗೆ ಆರೋಗ್ಯದ ಜಾಗೃತಿಯನ್ನು ಮೂಡಿಸುತ್ತದೆ. ದಾನದಿಂದ ಸಂಗ್ರಹವಾದ ರಕ್ತ ಅನೇಕರ ಬದುಕನ್ನು ಉಳಿಸುತ್ತದೆ. ಬೃಹತ್ ರಕ್ತದಾನ ಮತ್ತು ಉಚಿತ ಕಣ್ಣು ಹಾಗು ದಂತ ತಪಾಸಣಾ ಶಿಬಿರವು ನೂರಾರು ಗ್ರಾಮೀಣ ಜನರಿಗೆ ಆರೋಗ್ಯ ಜಾಗೃತಿ ಮತ್ತು ಕಾಳಜಿಯನ್ನು ಮೂಡಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರಾಮಕೃಷ್ಣ ಎಸ್. ಮಾತನಾಡಿ, ಬೃಹತ್ ರಕ್ತದಾನ ಮತ್ತು ಉಚಿತ ನೇತ್ರ ಹಾಗು ದಂತ ತಪಾಸಣಾ ಶಿಬಿರವು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲೇ ಬೇಕಾದ ಕಾರ್ಯಕ್ರಮ. ಇದಕ್ಕೆ ಹಲವು ಸಂಘ ಸಂಸ್ಥೆಗಳ ಸಹಕಾರವಿದೆ. ಈ ರಕ್ತದಾನ ನೂರಾರು ಜನರ ಆರೋಗ್ಯವನ್ನು ಬದುಕಿಸಲು ಉಪಯೋಗವಾಗಲಿದೆ ಎಂದರು. ಇಂತಹ ಕಾರ್ಯಕ್ರಮ ಹತ್ತಾರು ಗ್ರಾಮೀಣ ಪ್ರದೇಶಗಳಿಗೆ ಮಾದರಿಯಾಗಲಿದೆ ಎಂದು, ಶಿಬಿರಕ್ಕೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ವಠಾರದಲ್ಲಿ ಬೃಹತ್ ರಕ್ತದಾನ ಮತ್ತು ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ನೂರಾರು ಗ್ರಾಮೀಣ ಜನರು ಭಾಗವಹಿಸಿದ್ದರು. 60 ಕ್ಕೂ ಅಧಿಕ ಜನರು ರಕ್ತದಾನ ಮಾಡಿ, 100ಕ್ಕೂ ಅಧಿಕ ಜನರು ನೇತ್ರ ಹಾಗು ದಂತ ತಪಾಸಣೆಯ ಲಾಭವನ್ನು ಪಡೆದರು. ಶಿಬಿರದ ಬಳಿಕ ಸಂಜೆ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸಿದ ಕುತೂಹಲ ಭರಿತ ತುಳು ಹಾಸ್ಯಮಯ ‘ಓಂಕಾರ’ ನಾಟಕ ಜರುಗಿತು.
ಶಿಬಿರದಲ್ಲಿ ಕಾರ್ಯಕ್ರಮದ ಅತಿಥಿಗಳಾದ ಪಿಲಾತಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಎಂ. ತುಂಗಪ್ಪ ಬಂಗೇರ, ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲತಿ ಶೀನ, ರಾಜ್ಯ ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಲಕ್ಷ್ಮೀನಾರಾಯಣ ಉಡುಪ , ವ್ಯವಸ್ಥಾಪನಾ ಸಮಿತಿ ಪದವು ದೇವಸ್ಥಾನ ಅಧ್ಯಕ್ಷ ವಿವೇಕಾನಂದ ಪೂಜಾರಿ ಕೌಡೋಡಿ, ಮಂಗಳೂರು ಟಿ.ಎನ್.ಎನ್. ಸಮೂಹ ಸಂಸ್ಥೆಯ ಧೀರಜ್ ಟಿ. ನ್ಯಾಕ್, ಉದ್ಯಮಿ ಶ್ರೀಧರ್ ಜಿ. ಪೈ, ಶೇಖರ ಪೂಜಾರಿ ಅಗಲ್ಲೋಡಿ, ಹರೀಂದ್ರ ಪೈ ಶಶಾಂಕ್ , ಅಬ್ದುಲ್ ಕುಂಞ, ಅಬ್ದುಲ್ ನಜೀರ್ ಸಾಹೇಬ್, ಬಿಲ್ಡಿಂಗ್ ಕಂಟ್ರಾಕ್ಟರ್ ಮೋಹನ್ ಶೆಟ್ಟಿ, ಪ್ರಗತಿಪರ ಕೃಷಿಕ ಡೇನಿಸ್ ಫೆರ್ನಾಂಡಿಸ್, ಅಪೂರ್ವ ಬೋರ್ವೆಲ್ಸ್ & ಅರ್ಥ್ ಮೂವರ್ಸ್ ಮಾಲಕ ಚಂದ್ರಶೇಖರ ಭಟ್, ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಜಯಚಂದ್ರ ಬೊಳ್ಳಾರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಕಲ್ಲುಕೊಡಂಗೆ, ಗ್ರಾಮ ಪಂಚಾಯತ್ ಸದಸ್ಯೆ ಕಲ್ಯಾಣಿ ಇರ್ವತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದನ ಮತ್ತು ಅದ್ವೀತಿ ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮವನ್ನು ಪುನೀತ್ ಶೆಟ್ಟಿ ಕೈಮಾರು ಸ್ವಾಗತಿಸಿದರು, ಶಶಾಂಕ್ ಕಾರ್ಯಕ್ರಮವನ್ನು ನಿರೂಪಿಸಿ, ದುರ್ಗಾ ಫ್ರೆಂಡ್ಸ್ (ರಿ.) ಕಲ್ಲಡ್ಕ ಇರ್ವತ್ತೂರು ಇದರ ಅಧ್ಯಕ್ಷ ರಮೇಶ್ ನಾಯ್ಕ ವಂದಿಸಿದರು.ಶಿಬಿರದಲ್ಲಿ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.











