ಕನ್ಯಾಡಿ | : ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯೋರ್ವರ ಮೇಲೆ ಚಿರತೆ ದಾಳಿ ನಡೆಸಿ ಕಾಲಿಗೆ ಕಚ್ಚಿ ಗಂಭಿರ ಗಾಯಗೊಳಿಸಿದ ಘಟನೆ ಜ.16ರಂದು ಬೆಳಿಗ್ಗಿನ ಜಾವ ಕನ್ಯಾಡಿ | ಗ್ರಾಮದ ಅಂಡಿರ್ಮಾರ್ ಎಂಬಲ್ಲಿ ಸಂಭವಿಸಿದೆ.

ಕನ್ಯಾಡಿ | ಗ್ರಾಮದ ಅಂಡಿರ್ಮಾರ್ ನಿವಾಸಿ ಮಂಜಪ್ಪ ನಾಯ್ಕ (62ವ) ಅವರ ಕಾಲಿಗೆ ಚಿರತೆ ಕಚ್ಚಿದ ಗಾಯವಾಗಿದ್ದು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮಂಜಪ್ಪ ನಾಯ್ಕ ಅವರು ಇಂದು ಬೆಳಿಗ್ಗೆ 8.30 ಕ್ಕೆ ತಮ್ಮ ಮನೆಯಂಗಳದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸ್ಥಳೀಯ ಕಾಡಿನಿಂದ ಚಿರತೆ ಒಮ್ಮೆಲೆ ಅಂಗಳಕ್ಕೆ ಓಡಿ ಬಂದು ಮಂಜಪ್ಪ ನಾಯ್ಕ ಅವರ ಮೇಲೆ ದಾಳಿ ನಡೆಸಿದೆ. ಕೂಡಲೇ ಅವರು ಮನೆಯ ಬಳಿಯ ಅಡಿಕೆ ಮರ ಇರುವಲ್ಲಿ ಓಡಿ ಹೋಗಿ ಮರಕ್ಕೆ ಹತ್ತಿದರೆನ್ನಲಾಗಿದೆ. ಇವರ ಹಿಂದೆಯೇ ಬಂದ ಚಿರತೆ ಮರಕ್ಕೆ ಹತ್ತುತ್ತಿದ್ದ ಮಂಜಪ್ಪ ನಾಯ್ಕ ಅವರ ಕಾಲಿಗೆ ಕಚ್ಚಿ ಅವರನ್ನು ಕೆಳಗೆ ಎಳೆಯಲು ಪ್ರಯತ್ನಿಸಿದ್ದು, ಬೊಬ್ಬೆ ಹಾಕಿದ್ದಾಗ ಮನೆಯವರು ಓಡಿ ಬರುತ್ತಿದ್ದಂತೆಯೇ ಚಿರತೆ ಅಲ್ಲಿಂದ ಕಾಡಿಗೆ ಓಡಿಹೋಯಿತೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನಾದ್ಯಂತ ಅಲ್ಲಲ್ಲಿ ಚಿರತೆಗಳು ಕಂಡು ಬರುತ್ತಿದ್ದು ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಅರಣ್ಯ ಭಾಗದ ಹತ್ತಿರದ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಜಾಸ್ತಿಯಾಗುತ್ತಿದೆ. ಈ ಪ್ರದೇಶಗಳಲ್ಲಿ ರಸ್ತೆಗಳ ಮೂಲಕ ಶಾಲಾ ವಿದ್ಯಾರ್ಥಿಗಳ ಸಹಿತ ಜನ ಓಡಾಟವಿದೆ. ಇದೀಗ ಚಿರತೆ ಕಂಡು ಬಂದ ಸ್ಥಳಗಳ ರಸ್ತೆಗಳಲ್ಲಿ ಜನರು ಓಡಾಟ ನಡೆಸಲು ಭಯಪಡುವ ಸ್ಥಿತಿ ಉಂಟಾಗಿದೆ. ಅಲ್ಲದೆ ಇದು ರಬ್ಬರ್ ಟ್ಯಾಪಿಂಗ್ ಹಾಗೂ ತೋಟಗಳಿಗೆ ನೀರು ನೀಡುವ ಸಮಯವಾಗಿದ ರಾತ್ರಿ ಹೊತ್ತು ಕೃಷಿಕರು ತೋಟಗಳಿಗೆ ಹೋಗ ಬೇಕಾಗುತ್ತದೆ ಕೃಷಿಕರಿಗೆ ಚಿರತೆ ಭಯ ಕಾಡುತ್ತಿದೆ. ಚಿರತೆ ಇರುವ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ, ಇಲಾಖೆಯವರು ಮೌನ ವಹಿಸುತ್ತಿರುವ ಬಗ್ಗೆ ನಾಗರಿಕರಲ್ಲಿ ಬಹಳಷ್ಟು ಅಸಮಾಧಾನ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಹಗಲು ಹೊತ್ತಿನಲ್ಲಿ ಚಿರತೆಗಳು ಮನೆಯ ಬಾಗಿಲಿಗೆ ಬರುವ ಸ್ಥಿತಿ ನಿರ್ಮಾಣವಾಗಿದ್ದು ಸಂಬಂಧ ಪಟ್ಟ ಇಲಾಖೆಯವರು ಇದರ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. . ಆಸ್ಪತ್ರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಜಪ್ಪ ನಾಯ್ಕ ಅವರ ಮಗ ಪ್ರಭಾಕರ ನಾಯ್ಕ ಅವರು ತಂದೆಯ ಮೇಲೆ ಚಿರತೆ ದಾಳಿಯ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.











