23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಐರನ್ ರೋಡ್ರಿಗಸ್ ರವರಿಗೆ ಬೀಳ್ಕೊಡುಗೆ ಸಮಾರಂಭ

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ 29 ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿದ ಶಿಕ್ಷಕಿ ಐರನ್ ರೋಡ್ರಿಗಸ್ ಅವರ ಗೌರವಾರ್ಥ ಭಾವಪೂರ್ಣ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಅನುಗ್ರಹ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.

ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಸಹ ಶಿಕ್ಷಕ ವಸಂತ್ ಹೆಗಡೆ ಇವರು ಐರನ್ ರೋಡ್ರಿಗಸ್ ಇವರ ಶ್ಲಾಘನೀಯ ಸೇವೆಯನ್ನು ಪ್ರಶಂಸಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕ ವಂ ಫಾ ಅಬೆಲ್ ಲೋಬೊ ವಹಿಸಿಕೊಂಡು ಮಾತನಾಡಿ, “ಐರಿನ್ ಮ್ಯಾಡಂ ಅವರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಕಿ ಮಾತ್ರವಲ್ಲ, ಶಿಸ್ತು, ಮೌಲ್ಯಗಳು ಹಾಗೂ ಸನ್ಮಾರ್ಗದ ರೂಪಿಕರಣದಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಸಮರ್ಪಿತ ಸೇವೆ ನಮ್ಮ ಶಾಲೆಗೆ ಸದಾ ಮಾದರಿಯಾಗಿದೆ,” ಎಂದು ಪ್ರಶಂಸಿಸಿದರು.


ಪ್ರಾಂಶುಪಾಲರಾದ ವಂ ಫಾ ಡಾ.ವಿಜಯ್ ಲೋಬೊ ಅವರು, ಶಿಕ್ಷಕಿ ಐರಿನ್ ರೋಡ್ರಿಗಸ್ ಅವರ ಉತ್ತಮ ವ್ಯಕ್ತಿತ್ವ ಹಾಗೂ ಮೌಲ್ಯಗಳನ್ನು ಕಾಮನಬಿಲ್ಲಿನ ಏಳು ಬಣ್ಣಗಳಿಗೆ ಹೋಲಿಸಿ, ಅವರ ಜೀವನದ ಪ್ರತಿಯೊಂದು ಹಂತವೂ ವಿದ್ಯಾರ್ಥಿಗಳ ಮನದಲ್ಲಿ ಪ್ರೇರಣೆಯ ಬೆಳಕಾಗಿ ಉಳಿಯಲಿದೆ ಎಂದು ಹಾರೈಸಿದರು.


ವಿದ್ಯಾರ್ಥಿ ಪ್ರತಿನಿಧಿಯಾದ ಮಿಶೆಲ್ ಪಿಂಟೊ ಮಾತನಾಡಿ, ಐರಿನ್ ರೋಡ್ರಿಗಸ್ ಅವರ ಸರಳತೆ, ಕರ್ತವ್ಯನಿಷ್ಠೆ ಹಾಗೂ ಮಮತೆಯ ಬೋಧನಾ ಶೈಲಿಯನ್ನು ಸ್ಮರಿಸಿದರು. ತಮ್ಮ ಜೀವನದಲ್ಲಿ ಅವರು ಬಿತ್ತಿದ ಜ್ಞಾನ ಮತ್ತು ಮೌಲ್ಯಗಳ ಬೀಜವೇ ಇಂದಿನ ಸಾಧನೆಗೆ ಕಾರಣವೆಂದು ಕೃತಜ್ಞತೆಯಿಂದ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಶಿಕ್ಷಕಿಯವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಪ್ರತಿಕ್ರಿಯೆ ವ್ಯಕ್ತಪಡಿಸಿದ ಐರಿನ್ ರೋಡ್ರಿಗಸ್ ಅವರು, “ಈ ಶಾಲೆಯೇ ನನ್ನ ಕುಟುಂಬ. ವಿದ್ಯಾರ್ಥಿಗಳ ಪ್ರಗತಿಯೇ ನನ್ನ ದೊಡ್ಡ ಸಂಪತ್ತು,” ಎಂದು ಭಾವುಕರಾಗಿ ಹೇಳಿದರು.


ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯವರ ಕುಟುಂಬಸ್ಥರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿಸೋಜ, ಕಾರ್ಯದರ್ಶಿಯಾದ ಮರ್ಲಿನ್ ಡಿಸೋಜ, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಗುರುರಾಜ ಶಬರಾಯ, ಚರ್ಚ್ ಪಾಲನಾ ಮಂಡಳಿಯ ಸದಸ್ಯರಾದ ಆಂಟನಿ ಫೆರ್ನಾಂಡಿಸ್ ಹಾಗೂ ಅನಿತಾ ಮೋನೀಸ್, ಸ್ಟಾನಿ ಪಿಂಟೊ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಹಶಿಕ್ಷಕಿ ವಿನಯಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿ ಹೇಮಲತಾ ಸ್ವಾಗತಿಸಿ, ಸಹಶಿಕ್ಷಕ ರವಿಕುಮಾರ್ ಧನ್ಯವಾದ ಸಮರ್ಪಿಸಿದರು.

Related posts

ನಾವೂರು ಗ್ರಾ.ಪಂ. ನಲ್ಲಿ ಗ್ರಾಮ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಶಿರ್ಲಾಲಿನ ಶಾಲ್ವಿ ಜೈನ್

Suddi Udaya

ಅರಸಿನಮಕ್ಕಿ: ವಲಯ ಮಟ್ಟದ ಪ್ರಗತಿಬಂಧು ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಧನಾ ಸಮಾವೇಶ

Suddi Udaya

ಉಭಯ ಜಿಲ್ಲಾ ಜನಪ್ರತಿನಿಧಿಗಳ ಸಭೆ: ಕೆಂಪು ಕಲ್ಲು ಮತ್ತು ಮರಳು ಹಾಗೂ 9/11 ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವಂತೆ ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಮೇಲಂತಬೆಟ್ಟು : ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ಧರ್ಮಸ್ಥಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ

Suddi Udaya
error: Content is protected !!