ಉಜಿರೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗುರಿಪಳ್ಳ ಇಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ
ಮುಖ್ಯ ಶಿಕ್ಷಕಿ ಅವರು ಶಾಲಾ ಅಕ್ಷರ ದಾಸೋಹ ಖಾತೆ ಮತ್ತು ಎಸ್.ಎಸ್.ಎ ಖಾತೆಯಲ್ಲಿ ನಕಲಿ ಸಹಿ ಮಾಡಿ ಹಣವನ್ನು ಡ್ರಾ( ಹಿಂಪಡೆಯುವುದು) ಮಾಡಿರುವ ಬಗ್ಗೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಉಜಿರೆ ಗ್ರಾಮ ಪಂಚಾಯತ್ ಗೆ ದೂರು ನೀಡಿರುವುದು ವರದಿಯಾಗಿದೆ.
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಾಂಭ ಅವರ ಅವಧಿಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷಕಿ ಅವರು ಶಾಂಭ ರವರ ನಕಲು ಸಹಿ ಮಾಡಿ ಅಕ್ಷರ ದಾಸೋಹ ಖಾತೆಯಿಂದ ರೂ.27630ವನ್ನು ಡ್ರಾ ಮಾಡಿರುತ್ತಾರೆ. ಜೊತೆಗೆ ಎಸ್.ಎಸ್.ಎ ಖಾತೆಯಿಂದ ಮೂರು ಚೆಕ್ ಗಳು ಆದ ಚೆಕ್ ನಂಬ್ರ 670712 ರಿಂದ ರೂ.6723, 670713 ರಿಂದ ರೂ.10,000, 670711ರಿಂದ ರೂ.7742 ಹಣವನ್ನು ನಕಲಿ ಸಹಿ ಮೂಲಕ ಡ್ರಾ ಮಾಡಿರುತ್ತಾರೆ. ಈ ಬಗ್ಗೆ ಮುಖ್ಯ ಶಿಕ್ಷಕಿ ಮೇಲೆ ಸೂಕ್ತ ಕ್ರಮ ಕೈಗೊಂಡು, ಡ್ರಾ ಮಾಡಿರುವ ಎಲ್ಲಾ ಮೊತ್ತವನ್ನು ಆಯಾ ಖಾತೆಗೆ ಜಮೆ ಮಾಡುವಂತೆ ಉಜಿರೆ ಗ್ರಾಮ ಪಂಚಾಯತ್ ಮತ್ತು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ನೀಡಿದ್ದು, ದಕ್ಷಿಣ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರ ರವರ ಗಮನಕ್ಕೂ ತರಲಾಗಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರು ತಿಳಿಸಿರುತ್ತಾರೆ.
ಫೋರ್ಜರಿ ಸಹಿ ಮಾಡಿ
ಶಾಲೆಯ ಖಾತೆಯಿಂದ ಯಾವತ್ತೂ ಹಣವನ್ನು
ಡ್ರಾ ಮಾಡಿರುವುದಿಲ್ಲ,: ಮುಖ್ಯ ಶಿಕ್ಷಕಿ
ನಾನು ಯಾವುದೇ ಚೆಕ್ ಗೆ ಎಸ್ ಡಿ ಎಂ ಸಿ ಅಧ್ಯಕ್ಷರ ಫೋರ್ಜರಿ ಸಹಿ ಮಾಡಿ
ಶಾಲೆಯ ಖಾತೆಯಿಂದ ಯಾವತ್ತೂ ಹಣವನ್ನು ಡ್ರಾ ಮಾಡಿರುವುದಿಲ್ಲ,
ಅಧ್ಯಕ್ಷರ ಗಮನಕ್ಕೆ ಬಾರದೆ ಶಾಲಾ ಖಾತೆಯಿಂದ ಹಣ ಡ್ರಾ ಮಾಡುವ ಅವಕಾಶವೂ ಇರುವುದಿಲ್ಲ ಎಂದು ಶಾಲಾ ಮುಖ್ಯ ಶಿಕ್ಷಕಿ ಸ್ಪಷ್ಟನೆ ನೀಡಿದ್ದಾರೆ.
ಶಾಲೆಯ ಪ್ರತಿಯೊಂದು ಖರ್ಚುಗಳ ಬಾಬ್ತು ಅಧ್ಯಕ್ಷರು ಸಹಿ ಮಾಡಿ ಕೊಟ್ಟಿರುವ ಚೆಕ್ ಗಳನ್ನು ಮಾತ್ರ ಡ್ರಾ ಮಾಡಿರುತ್ತೇನೆ. ಫೋರ್ಜರಿ ಸಹಿ ಮಾಡಿ ಶಾಲಾ ಜಂಟಿ ಖಾತೆಯಿಂದ ಹಣ ಡ್ರಾ ಮಾಡಲು ಬ್ಯಾಂಕಿನಲ್ಲಿ ಸಾಧ್ಯವಿಲ್ಲ ಎಂಬ ವಿಷಯ ವ್ಯವಹಾರ ಜ್ಞಾನವಿರುವವರಿಗೆ ತಿಳಿಯುತ್ತದೆ.
ಇಂಥ ಕೃತ್ಯಕ್ಕೆ ಬ್ಯಾಂಕ್ ನಲ್ಲಿ ಅವಕಾಶ ನೀಡುವುದಿಲ್ಲ. ಬ್ಯಾಂಕಿನಲ್ಲಿ ಚೆಕ್ ಡ್ರಾ ಮಾಡುವ ವೇಳೆ ಸಂಬಂಧಪಟ್ಟವರು ಜಂಟಿ ಖಾತೆಯ ಸಹಿಗಳನ್ನು ಪರಿಶೀಲಿಸುವ ಅವಕಾಶವಿರುತ್ತದೆ. ಚೆಕ್ ನ ಹೆಸರು ಮತ್ತು
ಸಹಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ಚೆಕ್ ಮೊತ್ತ ನಗದೀಕರಿಸಲು ಸಾಧ್ಯ. ನಾನು ಯಾವತ್ತಿಗೂ ಫೋರ್ಜರಿ ಸಹಿ ಮಾಡಿ ಶಾಲಾ ಖಾತೆಯಿಂದ ಹಣ ಪಡೆದು ಇಲಾಖೆಗೆ ದ್ರೋಹ ಬಗೆದಿಲ್ಲ.
ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿಕೊಳ್ಳಲಾಗಿದೆ ಎಂಬುದು ದುರುದ್ದೇಶದಿಂದ ಕೂಡಿದ ಸಂಪೂರ್ಣ ಸುಳ್ಳು ಆರೋಪವಾಗಿದೆ.
ಈ ಬಗ್ಗೆ ಶಾಲಾ ದಾಖಲೆಗಳನ್ನು ಮತ್ತು ಬ್ಯಾಂಕ್ ದಾಖಲೆಗಳನ್ನು
ಪರಿಶೀಲನೆ ನಡೆಯಲಿ. ನಾನು ಯಾವ ತನಿಖೆಗೂ ಸಿದ್ಧಳಿದ್ದೇನೆ.
ನನ್ನ ವಿರುದ್ಧದ ಸುಳ್ಳು ತೇಜೋವಧೆ ಮತ್ತು ಸುಳ್ಳು ಆರೋಪದ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.











