
ಮೇಲಂತಬೆಟ್ಟು: ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಾ.14ರಂದು ನಡೆದ ಸಂಕ್ರಾಂತಿ ಪೂಜೆ ಹಾಗೂ ವಿಶೇಷ ರಂಗಪೂಜೆಯ ಸಂದರ್ಭದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮೇಲಂತಬೆಟ್ಟು ಗ್ರಾಮದ ಮಾಪಲಾಡಿ ನಿವಾಸಿ ಮಂಜುನಾಥ್ ಶಿವಲಿಂಗಪ್ಪ ಜಿ. ಇವರನ್ನು ಕ್ಷೇತ್ರದ ವತಿಯಿಂದ ಧರ್ಮದರ್ಶಿ ಯೋಗೀಶ್ ಪೂಜಾರಿ ಅವರು ಗೌರವಿಸಿದರು.
ನ್ಯಾಯವಾದಿ ಭಗೀರಥ ಜಿ. ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಾನಂದ ಅಂಕಾಜೆ ಲಾಯಿಲ ಅವರು ಮಾತನಾಡಿ, ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ್ ಅವರ ಸಾಧನೆಗಳನ್ನು ತಿಳಿಸಿದರು. ಮಾಪಲಾಡಿ ಸುರೇಶ್ ಶೆಟ್ಟಿ ಮಾಪಲಾಡಿಯವರು ಇವರಿಗೆ ಅವಕಾಶವನ್ನು ನಿರ್ಮಿಸಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಮಂಜುನಾಥ್ ಅವರು ತೊಡಗಿಸಿಕೊಂಡಿದ್ದು, ದೇವಿಯ ಅನುಗ್ರಹ ಇವರ ಈ ಸಾಧನೆಗೆ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು.

2022ರಲ್ಲಿ ನಡೆದ ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾತ್ರಿ ನಡೆಯುತ್ತಿದ್ದ ಶ್ರಮದಾನದಲ್ಲಿ ಮಂಜುನಾಥ್ ಅವರು ಸಕ್ರೀಯವಾಗಿ ಭಾಗವಹಿಸಿ ದೇವಿಯ ಸೇವೆಯನ್ನು ಮಾಡಿದ್ದರು. ದೇವಿಯ ಅನುಗ್ರಹದಿಂದ ಅವರು ಪ್ರಥಮ ಹಂತದಲ್ಲೇ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆದು ಪಾಸಾಗಿದ್ದಾರೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿದೆ. ಇವರ ತಾಯಿ ನಿಂಗವ್ವ ಮಾಪಲಾಡಿ ಸುರೇಶ್ ಶೆಟ್ಟಿ ಭ್ರಾಮರಿ ಇವರ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದರು. ಮಂಜುನಾಥ್ ಇವರ ಸಾಧನೆಯನ್ನು ಗುರುತಿಸಿ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಭ್ರಾಮರಿ ಮಾಪಲಾಡಿ, ರಮೇಶ್ ಬಂಗೇರ ಅಂಕಾಜೆ ಲಾಯಿಲ, ಲಕ್ಷ್ಮಣ ಶಾಂತಿ, ಯಶವಂತ ಶಾಂತಿ, ಮಂಜುನಾಥ್ ಅವರ ತಾಯಿ ನಿಂಗವ್ವ, ಶೀನ ಮೇಲಂತಬೆಟ್ಟು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಸಂಕ್ರಾಂತಿ ಪೂಜೆ ಹಾಗೂ ವಿಶೇಷ ರಂಗಪೂಜೆ ಲಕ್ಷ್ಣಣ ಶಾಂತಿ ಅವರ ನೇತೃತ್ವದಲ್ಲಿ ನಡೆಯಿತು.












