May 6, 2026
ತಾಲೂಕು ಸುದ್ದಿನಿಧನಪ್ರಮುಖ ಸುದ್ದಿಬೆಳ್ತಂಗಡಿ

ಯಕ್ಷಗಾನದ ದಶಾವತಾರಿ ಸೂರಿಕುಮೇರು ಕೆ.ಗೋವಿಂದ ಭಟ್ ವಿಧಿವಶ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ 50 ವರ್ಷಗಳ ದಾಖಲೆ ತಿರುಗಾಟ ಮಾಡಿದ, ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ನಾಟ್ಯ ಗುರು ಮತ್ತು ದಶಾವತಾರಿ ಎಂದೇ ಖ್ಯಾತರಾದ ಸೂರಿಕುಮೇರು ಕೆ.ಗೋವಿಂದ ಭಟ್(88ವ) ಅವರು ಮಾ.20 ರಂದು ನಿಧನರಾದರು.

ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗೋವಿಂದ ಭಟ್ಟರು ಕೆಲವು ಸಮಯಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹಿರಿಯ ಪುತ್ರನ ಮನೆಯಲ್ಲಿ ಶುಕ್ರವಾರ ರಾತ್ರಿ 9.10ರ ವೇಳೆ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡದ ಬಂಟ್ವಾಳದವರಾದ ಇವರು ಸುಮಾರು ಆರು ದಶಕಗಳ ಕಾಲ ರಂಗಸ್ಥಳದಲ್ಲಿ ಸಕ್ರಿಯರಾಗಿದ್ದು, ತಮ್ಮ ಗಡುಸು ಕಂಠ, ಅದ್ಭುತ ಅರ್ಥಗಾರಿಕೆ ಮತ್ತು ಪಾತ್ರಾಭಿನಯದಿಂದ (ಕೌರವ, ಕರ್ಣ, ಇಂದ್ರಜಿತು) ಪ್ರಸಿದ್ಧರಾಗಿದ್ದರು. ಇವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸೂರಿಕುಮೇರು ಗೋವಿಂದ ಭಟ್ ಯಕ್ಷಗಾನ ರಂಗದಲ್ಲಿ ಮೂಲ್ಕಿ, ಕೂಡ್ಲು, ಸುರತ್ಕಲ್‌, ಇರಾ ಮೇಳಗಳಲ್ಲಿ ಕೆಲಸ ಮಾಡಿದ ಬಳಿಕ ದೀರ್ಘಾವಧಿ ಕಾಲ ಧರ್ಮಸ್ಥಳ ಮೇಳದಲ್ಲಿ ವೃತ್ತಿ ಬದುಕು ನಿರ್ವಹಿಸಿದ ಅವರು ಮೂವರು ಪುತ್ರರು ಹಾಗೂ ಕುಟುಂಬ ವರ್ಗದವರು, ಯಕ್ಷಾಭಿಮಾನಿಗಳ ಅಗಲಿದ್ದಾರೆ.

ಗೋವಿಂದ ಭಟ್ಟರ ಪತ್ನಿ ಸಾವಿತ್ರಿ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದರು. ಸಹಕಲಾವಿದರಿಂದ ಗುರು ಗೋವಿಂದ ಭಟ್ಟರು ಎನಿಸಿಕೊಂಡ ಅವರು, ಆರಂಭದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿಯೂ ಸೈ ಎನಿಸಿಕೊಂಡರು. ಬಳಿಕ ವೈವಿಧ್ಯಮಯ ಪಾತ್ರ ನಿರ್ವಹಣೆ ಮೂಲಕ ಯಾವ ವೇಷಕ್ಕೂ ಸೈ ಎಂದು ಮೇಳಕ್ಕೆ ಅನಿವಾರ್ಯರಾದರು. ಅವರ ಕೌರವ ಪಾತ್ರಕ್ಕೆ ತನ್ನದೇ ಆದ ವಿಶೇಷತೆಯಿದೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮಯ ಹೆಗ್ಗಡೆ, ಗಣಮಣಿ, ಈಶ್ವರ, ಶ್ರೀದೇವಿ ಮಹಾತ್ಮಿಯ ರಕ್ತಬೀಜ, ಶ್ರೀದೇವಿ ಸಹಿತ ದೇವೇಂದ್ರ, ಕೌರವ, ಶತ್ರುಘ್ನ, ಕೀಚಕ, ದಕ್ಷ, ಮಾಗಧ, ಶಿಶುಪಾಲ ಪಾತ್ರ ಅವಿಸ್ಮರಣೀಯ.

ನಾನಾ ಪಾತ್ರಗಳಿಂದ ಪ್ರಖ್ಯಾತ :ಮಣಿಮೇಖಲೆ, ಕನಕರೇಖೆ, ಕಾವೇರಿ ಮಹಾತ್ಮ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಗೋವಿಂದ ಭಟ್‌ ಅವರು ವಿಶೇಷವಾಗಿ ರಕ್ತಬೀಜ, ಇಂದ್ರಜಿತ್, ಭೀಷ್ಮ, ಕೌರವ ಮುಂತಾದ ನಾನಾ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ. ಕುಮಾರಯ್ಯ ಹೆಗ್ಗಡೆ, ಋುತುಪರ್ಣ, ಕೌರವ ಪಾತ್ರ ಪ್ರಸಿದ್ದ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ. ಅವರ ಅದ್ಭುತ ಅರ್ಥಗಾರಿಕೆ, ಶಿಸ್ತುಬದ್ಧ ನೃತ್ಯ ಮತ್ತು ವಚೋವೈಖರಿಗೆ 2016ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಸಂಘ, ಸಂಸ್ಥೆಗಳಿಂದ ಸನ್ಮಾನ, ಬಿರುದುಗಳು ಸಂದಿವೆ.

ಗೋವಿಂದ ಭಟ್ಟರ ಬಾಲ್ಯ:ಕಿನಿಲ ಶಂಕರನಾರಾಯಣ ಭಟ್ಟ ಮತ್ತು ಲಕ್ಷ್ಮೀ ಅಮ್ಮ ದಂಪತಿ ಪುತ್ರನಾಗಿ 1940, ಮಾರ್ಚ್ 22ರಂದು ಜನಿಸಿದ ಭಟ್ಟರು, ಕೋಡಪದವು, ವಿಟ್ಲದಲ್ಲಿ 7ನೇ ತರಗತಿವರೆಗೆ ಕಲಿತರು. ಏ.26, 1966ರಂದು ಸಾವಿತ್ರಿ ಅವರೊಂದಿಗೆ ವಿವಾಹ. ಮೂವರು ಪುತ್ರರು.ಬಾಲ್ಯದಲ್ಲೇ ಸಂಕಷ್ಟದ ಜೀವನ ಧೈರ್ಯದಿಂದ ಎದುರಿಸಿದ ಭಟ್ಟರು, ಯಕ್ಷ ಗಾನಕ್ಕೆ ಜೀವನೋಪಾಯಕ್ಕಾಗಿ ಸೇರಿದರೂ ಬಳಿಕ ಹಿರಿಯ ಕಲಾವಿದರಿಂದ ಪಳಗಿ ರಂಗಸ್ಥಳದ ರಾಜನಾಗಿ ಮೆರೆದರು. ಕುರಿಯ ವಿಠಲ ಶಾಸ್ತ್ರಿ, ಪರಮಶಿವನ್, ಮಾಧವ ಮೆನನ್ ಮತ್ತು ರಾಜನ್ ಅಯ್ಯರ್ ಅವರಿಂದ ನಾಟ್ಯಾಭ್ಯಾಸ ಕಲಿತು 1951ರಲ್ಲಿ ಯಕ್ಷ ಗಾನ ಮೇಳಕ್ಕೆ ಸೇರ್ಪಡೆಗೊಂಡರು.

Related posts

ಕುವೆಟ್ಟು :ಪಯ್ಯೋಟ್ಟು ನಿವಾಸಿ ಡೀಕಯ್ಯ ಮೂಲ್ಯ ನಿಧನ

Suddi Udaya

ಉಜಿರೆ: ನಿವೃತ್ತ ಕಾಫಿ ಬೋರ್ಡ್ ಅಧಿಕಾರಿ ಸೀತಾರಾಮ ಪುತ್ರಾಯ ನಿಧನ

Suddi Udaya

ಐಟಿ ಪೆಸ್ಟ್ ನಲ್ಲಿ ಶ್ರೀ ಗುರುದೇವ ಕಾಲೇಜು ಸಮಗ್ರ ಚಾಂಪಿಯನ್

Suddi Udaya

ಎಸ್. ಡಿ. ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ರಸ್ತೆ ಸಂಚಾರ ಸುರಕ್ಷತಾ ಜಾಗೃತಿ’ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ನೆಲ್ಯಾಡಿಯ ವಿವಿಧ ಸಂಘಟನೆಗಳಿಂದ ಗೌರವ ಅರ್ಪಣೆ

Suddi Udaya

ಪಟ್ರಮೆ: ಚಾಲಕನ ನಿಯಂತ್ರಣ ತಪ್ಪಿ ಹೊಳೆ ಬದಿಗೆ ಬಿದ್ದ ಕಾರು

Suddi Udaya
error: Content is protected !!