25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ : ವಾರ್ಷಿಕೋತ್ಸವ

ಉಜಿರೆ : ಇಂದಿನ ಯುವ ಸಮುದಾಯವೇ ಭಾರತದ ಭವಿಷ್ಯದ ಆಸ್ತಿ. ವಿದ್ಯಾರ್ಥಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ವರ್ತಮಾನದ ಎಲ್ಲಾ ಬೆಳವಣಿಗೆಗಳ ಅರಿವು ನಮಗಿರಬೇಕು. ಮುಂಬರುವ ದಶಕಗಳಲ್ಲಿ ಡಿಪ್ಲೋಮಾ ಕ್ಷೇತ್ರಗಳಿಗೆ ವಿಫುಲವಾದ ಅವಕಾಶಗಳು ಹರಿದು ಬರಲಿದ್ದು, ಕೃತಕ ಬುದ್ಧಿಮತ್ತೆಯಂತ ಸವಾಲುಗಳ ನಡುವೆ‌ ವಿದ್ಯಾರ್ಥಿಗಳು ಕೌಶಲ್ಯಭರಿತರಾಗಿ ಉದ್ಯೋಗಗಳಿಗೆ‌ ಸನ್ನದರಾಗಬೇಕು ಎಂದು ಪ್ರಾಟ್ & ವಿಟ್ನಿ ಇಂಡಿಯಾ ಎಚ್‌ಆರ್ ಹೆಡ್ ಹಾಗೂ ಬೆಂಗಳೂರು ವಿಭಾಗದ ರೋಲ್ಸ್-ರಾಯ್ಸ್ ಇಂಡಿಯಾದ ಮಾಜಿ ಎಚ್‌ಆರ್ ಸಂದೀಪ್ ಎಸ್. ಪಿ. ಅಭಿಪ್ರಾಯಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿನ ಪಠ್ಯದ ಜೊತೆಗೆ ಪಠ್ಯೇತರ ಪ್ರಾಯೋಗಿಕ ಚಟುವಟಿಕೆಗಳು ನಮ್ಮನು ಬಹು ಎತ್ತರಕ್ಕೆ ಹೆಜ್ಜೆ ಹಾಕುವಂತೆ ಮಾಡುತ್ತದೆ. ಪ್ರತಿ ಬೆಳೆವಣಿಗೆಯಲ್ಲೂ ಕುತೂಹಲ ಮತ್ತು ಪ್ರಶ್ನೆಗಳು ಹುಟ್ಟಬೇಕು ಇದು ನಮ್ಮನ್ನು ಬೌದ್ಧಿಕವಾಗಿ ಸಮರ್ಥರನ್ನಾಗಿಸುತ್ತದೆ. ಈ ಮೂಲಕ ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಯಾವ ಹಂತದ ಹುದ್ದೆಯಲ್ಲಿದ್ದೇವೆ ಎಂಬುದಕ್ಕೆ ಚಿಂತಿತರಾಗದೇ ಇರುವ ಹುದ್ದೆಯ ಕಾರ್ಯವನ್ನು ಎಷ್ಟು ಕ್ರಿಯಾತ್ಮಕವಾಗಿ ಮತ್ತು ಸರಳವಾಗಿ ನಿರ್ವಹಿಸಬಲ್ಲೆವು ಎಂಬುದರಲ್ಲಿ ನಿರತವಾಗಬೇಕು. ಅವಕಾಶಗಳ ಸದುಪಯೋಗ ಹೊಸ ಅನುಭವವನ್ನು ನೀಡುವ ಜೊತೆಗೆ ಮತ್ತಷ್ಟು ಹೊಸ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಎಂದು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಯನ್ನು ಗುರುತಿಸಿ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎನ್ ಶಶಿಶೇಖರ್ ಕಾಕತ್ಕಾರ್ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ತಮ್ಮ ಉದ್ಯೋಗದ ಬದುಕಿನಲ್ಲಿ ನಾಗರಿಕ ಪ್ರಜ್ಞೆಯನ್ನು ಮರೆಯದೆ ಶಿಸ್ತು ಮತ್ತು ಸುಸಂಸ್ಕೃತರಾಗಿ ಬದುಕಬೇಕು. ನಕಾರಾತ್ಮಕ ಚಿಂತನೆಗಳಿಗೆ ತಲೆದೂಗದೆ ಸಕಾರಾತ್ಮಕ ಯೋಚನೆಯಿಂದ ಯಶಸ್ವಿನೆಡೆಗೆ ಸಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಾರ್ಷಿಕೋತ್ಸವ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸಾಧನೆ, ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಭೇಟಿ, ಕ್ಯಾಂಪಸ್ ನೇಮಕಾತಿ ಸೇರಿದಂತೆ ಇತ್ಯಾದಿ ಬೆಳವಣಿಗೆಗಳ ಶೈಕ್ಷಣಿಕ ವರದಿಯನ್ನು ಅತಿಥಿಗಳು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷದಲ್ಲಿ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಉಪನ್ಯಾಸಕ ಪ್ರವೀಣ್ ಬಿ.ಜಿ ಪ್ರಶಸ್ತಿಗಳನ್ನು ವಾಚಿಸಿದರು. ಬಳಿಕ ಅತಿಥಿಗಳಾದ ಪ್ರಾಟ್ & ವಿಟ್ನಿ ಇಂಡಿಯಾ ಎಚ್‌ಆರ್ ಹೆಡ್ ಹಾಗು ಬೆಂಗಳೂರು ವಿಭಾಗದ ರೋಲ್ಸ್-ರಾಯ್ಸ್ ಇಂಡಿಯಾದ ಮಾಜಿ ಎಚ್‌ಆರ್ ಸಂದೀಪ್ ಎಸ್. ಪಿ. ರವರನ್ನು ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಂಕರ್ ಭಟ್ ಎಚ್ ಆರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕ ಸಂಪತ್ ಕುಮಾರ್ ನಿರೂಪಿಸಿ, ಉಪನ್ಯಾಸಕಿ ರೆನಿಟಾ ಫೆರ್ನಾಂಡಿಸ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related posts

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya

ಮದ್ದಡ್ಕ: ಕಾರಿನೊಳಗೆ ಸಿಲುಕಿಕೊಂಡ ಮಗು: ಪ್ರಾಣಾಪಾಯದಿಂದ ಪಾರು

Suddi Udaya

ಆ 9-15 ಬೆಳ್ತಂಗಡಿಯಲ್ಲಿ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ,

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ನೆರಿಯ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ರೋಟರಿ ಕ್ಲಬ್ ಹಾಗೂ ಕಾನ್ ಫಿನ್ ಹೋಮ್ಸ್ ಸಹಕಾರದಲ್ಲಿ ಸಿಯೋನ್ ಆಶ್ರಮದ ನಿವಾಸಿಗಳಿಗೆ 135 ಮಂಚಗಳು ಹಾಗೂ ಹಾಸಿಗೆ ಸಾಮಗ್ರಿಗಳ ಕೊಡುಗೆ

Suddi Udaya

ಶಿರ್ಲಾಲು: ಕೃಷಿಕ ನಾರಾಯಣ ಗೌಡ ನಿಧನ

Suddi Udaya
error: Content is protected !!