23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಬಿ.ಸಿ. ರೋಡ್‌-ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್ದಾರಿ 73 ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ರೂ.64 ಕೋಟಿ ಮಂಜೂರು: ಸಂಸದ ಕ್ಯಾ. ಚೌಟ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ. ರೋಡ್‌ನಿಂದ ಪೂಂಜಾಲಕಟ್ಟೆವರೆಗಿನ ಹೆದ್ದಾರಿ ನಿರ್ವಹಣೆ, ಬಿ.ಸಿ. ರೋಡ್ ಜಂಕ್ಷನ್‌ನಿಂದ ಗಾಣದಪಡ್ಪು ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 64 ಕೋಟಿ ರೂ. ಮಂಜೂರು ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

ಈ ಕಾಮಗಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿರುವ ಸಂಸದರು, ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗಿನ ಸುಮಾರು 20 ಕಿಮೀ. ಹೆದ್ದಾರಿಯ ನಿರ್ವಹಣೆ ಕಾಮಗಾರಿಗಳಿಗಾಗಿ ಒಟ್ಟು 34.53 ಕೋಟಿ ರೂ.ಗಳ ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಜೂರು ಮಾಡಿದೆ. ಜತೆಗೆ, ಬಿ.ಸಿ. ರೋಡ್‌ ಜಂಕ್ಷನ್‌ನಿಂದ ಬಂಟ್ವಾಳ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಶ್ರೀ ನಾರಾಯಣಗುರು ಮಂದಿರದವರೆಗಿನ ರಸ್ತೆ ಸದ್ಯ ಅಗಲೀಕರಣಕ್ಕೆ ಬಾಕಿಯಿದೆ. ಈ ಭಾಗದ ಹೆದ್ದಾರಿಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಒಟ್ಟು 22.59 ಕೋಟಿ ರೂ.ಗಳ ಅನುದಾನ ದೊರೆತಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.

ಹಾಗೆಯೇ, 73 ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ. ರೋಡ್‌ ಜಂಕ್ಷನ್‌, ಚಾರ್ಮಾಡಿ ಘಾಟಿಯಲ್ಲಿ ರಸ್ತೆಗಳ ನಿರ್ವಹಣೆ ಕಾಮಗಾರಿಗಾಗಿ 6.92 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಜಿಲ್ಲೆಯ ಈ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ನಮ್ಮ ಭಾಗದ ಸುಗಮ ಸಂಚಾರ ಹಾಗೂ ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡಲಿದೆ. ಮೂಲಸೌಕರ್ಯದ ಈ ಅಭಿವೃದ್ಧಿಯು ‘ವಿಕಸಿತ ದಕ್ಷಿಣ ಕನ್ನಡ’ ನಿರ್ಮಾಣದ ಮೂಲಕ ‘ವಿಕಸಿತ ಭಾರತ’ದ ಸಂಕಲ್ಪ ಸಾಕಾರಗೊಳಿಸುವ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಕ್ಯಾ. ಚೌಟ ಸಂತಸ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕೆಲಸಗಳಿಗೆ ಹಾಗೂ ಕೆಲವು ಕಡೆ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ದೊರೆಯುತ್ತಿರುವುದರಿಂದ ಜಿಲ್ಲೆಯಲ್ಲಿ ವಾಹನಗಳು ಹಾಗೂ ಸರಕು ವಾಹನಗಳ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ನಮ್ಮ ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿ ಕೆಲಸಗಳಿಗೆ ಸೂಕ್ತ ಅನುದಾನ ಮಂಜೂರು ಮಾಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.

ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಕಾಮಗಾರಿ ಪ್ರಗತಿಯಲ್ಲಿ: ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಹೆದ್ದಾರಿಯನ್ನು ಕೂಡ ಸುಮಾರು 613.665 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿಯಾದ 73ರಲ್ಲಿ ಬಿ.ಸಿ ರೋಡ್‌ನಿಂದ ಪೂಂಜಾಲಕಟ್ಟೆ ವರೆಗೆ ಹೆದ್ದಾರಿ ನಿರ್ವಹಣೆಗೆ ಈಗ ಅನುದಾನ ಮಂಜೂರಾದ ಹಿನ್ನಲೆ ಶೀಘ್ರದಲ್ಲೇ ಕಾಮಗಾರಿ ಕೂಡ ಆರಂಭವಾಗಲಿದೆ. ಬಿಸಿ ರೋಡ್‌ ಜಂಕ್ಷನ್‌ ಬಳಿಯ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೂ ಚಾಲನೆ ದೊರೆಯಲಿದೆ. ಆ ಮೂಲಕ, ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಜಾಲ ಮತ್ತಷ್ಟು ಉತನ್ನತೀಕರಣಗೊಳ್ಳುವ ಕಾರ್ಯ ನಿರಂತರ ಪ್ರಗತಿಯಲ್ಲಿದೆ ಎಂದು ಸಂಸದ ಕ್ಯಾ. ಚೌಟ ತಿಳಿಸಿದ್ದಾರೆ.

Related posts

ವಿಧಾನಪರಿಷತ್ತು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ

Suddi Udaya

ಉಜಿರೆಯಲ್ಲಿ ತಾಲೂಕಿನ ಮೊದಲ ಹೈಜೀನಿಕ್ ಚಿಕನ್ ಮಳಿಗೆ ಉದಯ ಚಿಕನ್ ಶುಭಾರಂಭ

Suddi Udaya

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ವೈದ್ಯಕೀಯ ನೆರವು

Suddi Udaya

ನೆರಿಯ ಆಲಂಗಾಯಿಗೆ ರೂ.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಾಲ್ಮೀಕಿ ಆಶ್ರಮ ಶಾಲೆಗೆ ಶಿಲಾನ್ಯಾಸ

Suddi Udaya

ಸಿ.ಎ ಪರೀಕ್ಷೆ: ಕತ್ತೋಡಿ ನಿವಾಸಿ ಅಕ್ಷಯ್ ಜೈನ್ ಉತ್ತೀರ್ಣ

Suddi Udaya

ಬೆಳ್ತಂಗಡಿ: ವಿಶೇಷಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya
error: Content is protected !!