ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಇದರ ಕೋರ್ ಕಮಿಟಿ ಸಭೆಯು ವೇದಿಕೆಯ ಸ್ಥಾಪಕ ಅಧ್ಯಕ್ಷ ಕೆ. ವಸಂತ್ ಸಾಲಿಯಾನ್ ರವರ ಮನೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೆ. ವಸಂತ್ ಸಾಲಿಯಾನ್ ವಹಿಸಿ ಮಾತನಾಡಿ ಮೂರು ದಶಕಗಳ ಹಿಂದೆ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷನಾಗಿರುವುದು ನನಗೆ ಹೆಮ್ಮೆ ತರುತ್ತಿದೆ. ಅಂದಿನ ಹೋರಾಟ ಇಂದು ನಮ್ಮ ಜನಜಾಗೃತಿ ವೇದಿಕೆ ಕಾರ್ಯಕ್ರಮಗಳು, ರಾಜ್ಯ ವ್ಯಾಪ್ತಿ ಸಂಘಟಿಸಿರುವುದು ಸಂತಸ. ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ವ್ಯಸನಮುಕ್ತ ಸಮಾಜದ ಕನಸನ್ನು ನನಸು ಮಾಡಲು ನಮ್ಮೆಲ್ಲರಿಗೂ ಈ ವೇದಿಕೆಯ ಮೂಲಕ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಇನ್ನು ಮುಂದಿನ ದಿನಗಳಲ್ಲಿ ಅಧ್ಯಕ್ಷರುಗಳು ಈ ಜನಜಾಗೃತಿ ಕಾರ್ಯಕ್ರಮಗಳನ್ನು ಬಹಳ ಪರಿಪೂರ್ಣವಾಗಿ ಅನುಷ್ಠಾನ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಪ್ರಾಸ್ತಾವಿಕ ಮಾತಿನೊಂದಿಗೆ ಜನಜಾಗೃತಿ ವೇದಿಕೆಯ ಮತ್ತು ತಾಲೂಕು ವೇದಿಕೆಯ ಧ್ಯೇಯ ಉದ್ದೇಶಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡುವುದರ ಜೊತೆಗೆ ಎಲ್ಲರನ್ನೂ ರಾಜ್ಯ ಕಾರ್ಯದರ್ಶಿ ವಿವೇಕ್ ವಿ. ಪಾಯಸ್ ಸ್ವಾಗತಿಸಿದರು.
ಈ ಸಂದರ್ಭ ಅಕ್ರಮ ಮದ್ಯ ಮಾರಾಟ, ಕೋಳಿ ಅಂಕ ಹಾಗೂ ಶಾಲಾ ಕಾಲೇಜುಗಳಲ್ಲಿ ನಡೆಸಲಾಗುವ ಮಕ್ಕಳ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು ಇದಕ್ಕೆ ಪೂರಕವಾದ ಸ್ಪಷ್ಟೀಕರಣವನ್ನು ಕೂಡ ನೀಡಿದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಂಘಟನಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪುತ್ತೂರು ಮಾತನಾಡಿ ಡಾ|| ಹೆಗ್ಗಡೆಯವರ ಜನಜಾಗೃತಿ ಕಾರ್ಯಕ್ರಮದಿಂದ ನಮಗೂ ಸಮಾಜ ಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಇದನ್ನು ಎಲ್ಲರೂ ಒಗ್ಗಟ್ಟಾಗಿ ಬಳಸಿಕೊಂಡು ಸಮಾಜ ಸೇವೆ ಮಾಡೋಣ ಎಂದು ಶುಭ ಹಾರೈಸಿದರು.

ತಾಲೂಕು ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ಮಾತನಾಡಿ ತಮ್ಮ ಅವಧಿಯಲ್ಲಿ ನಡೆಸಿದ ಹೋರಾಟ ಹಾಗೂ ಅನುಭವಗಳನ್ನು ಹಂಚಿಕೊಂಡರು.
ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಿಮ್ಮಪ್ಪ ಗೌಡ ಬೆಳಾಲು, ಡಿ. ಎ ರಹಿಮಾನ್, ಕಿಶೋರ್ ಹೆಗ್ಡೆ, ಶಾರದ ರೈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್ ದಂಪತಿಗಳನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ತಾಲೂಕು ಯೋಜನಾಧಿಕಾರಿಗಳಾದ ಯಶೋಧರ್, ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಬಂಧಕರಾದ ಚಂದ್ರಾವತಿ ಹಾಗೂ ಭಾಗಿರಥಿ, ಮೇಲ್ವಿಚಾರಕಿ ಪದ್ಮಾವತಿ ಉಪಸ್ಥಿತರಿದ್ದರು.
ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್ ರವರು ವಂದಿಸಿದರು. ಜನಜಾಗೃತಿ ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.












