ಬೆಳ್ತಂಗಡಿ: ಹೊಸಂಗಡಿ ಗ್ರಾಮದ ಅಂಗಾರಕರಿಯ ಸೂರ್ಯನಾರಾಯಣ ದೇವಸ್ಥಾನದ ಸಮೀಪ ಫಲ್ಗುಣಿ ನದಿಯ ಬಲದಂಡೆ ಸಂರಕ್ಷಣಾ ರಚನೆ ಕಾಮಗಾರಿಗೆ ರಾಜ್ಯ ಸರ್ಕಾರವು ರೂ.50 ಲಕ್ಷ ಅನುದಾನವನ್ನು ಮಂಜೂರು ಮಾಡಿದೆ ಎಂದು ಶಾಸಕ ಹರೀಶ್ ಪೂಂಜರವರು ತಿಳಿಸಿದ್ದಾರೆ.
ನದಿ ತೀರದ ಭೂಕ್ಷಯ ತಡೆಗಟ್ಟುವುದು ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿಗಳು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಉದ್ದೇಶದಿಂದ ಈ ಕಾಮಗಾರಿಯ ಅಗತ್ಯತೆ ಬಗ್ಗೆ ಮಾನ್ಯ ಸಣ್ಣ ನೀರಾವರಿ ಸಚಿವರ ಗಮನಕ್ಕೆ ತಂದು ಮನವರಿಕೆ ಮಾಡಲಾಗಿದ್ದು, ಅದರ ಫಲವಾಗಿ ಅನುದಾನ ಮಂಜೂರಾಗಿದೆ.
ಈ ಕಾಮಗಾರಿಯಿಂದ ನದಿ ತೀರದ ಪ್ರದೇಶಗಳಲ್ಲಿ ಭೂಸರಣಿ ಸಮಸ್ಯೆ ನಿಯಂತ್ರಣಕ್ಕೆ ಬಂದು, ಸ್ಥಳೀಯ ನಿವಾಸಿಗಳು ಹಾಗೂ ರೈತಾಪಿ ವರ್ಗಕ್ಕೆ ಬಹಳ ಪ್ರಯೋಜನವಾಗಲಿದೆ. ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರಕ್ಕೆ ಹಾಗೂ ವಿಶೇಷ ಸಹಕಾರ ನೀಡಿದ ಮಾನ್ಯ ಸಣ್ಣ ನೀರಾವರಿ ಸಚಿವರಿಗೆ ಶಾಸಕ ಹರೀಶ್ ಪೂಂಜ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.












